ಟಿಕೆಟ್ಗಾಗಿ ಪಕ್ಷಪಾತ, ಭ್ರಷ್ಟಾಚಾರ: ಬಿಹಾರ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಕಣ್ಣೀರಿಟ್ಟ ಎಲ್ಜೆಪಿ ನಾಯಕ ಅಭಯ್ ಕುಮಾರ್ ಸಿಂಗ್!

ಪಾಟ್ನಾ: ಬಿಹಾರ ಚುನಾವಣೆಯಲ್ಲಿ (Bihar Elections) ಸ್ಪರ್ಧಿಸಲು ಟಿಕೆಟ್ ಕೊಡಲಿಲ್ಲ ಎಂದು ಎಲ್ಜೆಪಿ(ಆರ್) ನಾಯಕ ಅಭಯ್ ಕುಮಾರ್ ಸಿಂಗ್ ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

ಸಮಷ್ಟಿಪುರ ಜಿಲ್ಲೆಯ ಮೋರ್ವಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಕ್ಕೆ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಅಭಯ್ ಕುಮಾರ್ ಸಿಂಗ್ ಕ್ಯಾಮೆರಾ ಮುಂದೆ ದುಃಖಿಸಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.
ಪಕ್ಷದ ಹಿರಿಯ ನಾಯಕರು ಟಿಕೆಟ್ ವಿತರಣೆಯಲ್ಲಿ ಪಕ್ಷಪಾತ ಮತ್ತು ಭ್ರಷ್ಟಾಚಾರ ಮಾಡಿದ್ದಾರೆ. ಯಾರೋ ನನಗಿಂತ ಹೆಚ್ಚು ಹಣ ಕೊಟ್ಟಿದ್ದಾರೆ. ಅದಕ್ಕಾಗಿಯೇ ಅವರಿಗೆ ಟಿಕೆಟ್ ಸಿಕ್ಕಿತು. ನಾನು ಈಗ ರಾಜಕೀಯ ಬಿಡುತ್ತಿದ್ದೇನೆ ಎಂದು ಸಿಂಗ್ ಗಂಭೀರ ಆರೋಪ ಮಾಡಿ ಕಣ್ಣೀರಿಟ್ಟಿದ್ದಾರೆ.
ನಾನು 25 ವರ್ಷಗಳ ಕಾಲ ಹೋರಾಡಿದೆ. ನಂತರ 30 ವರ್ಷಗಳ ಕಾಲ ಮತ್ತೆ ಚುನಾವಣೆಗಳಲ್ಲಿ ಹೋರಾಡಿದೆ. ಇದು ಇನ್ಮುಂದೆ ನನ್ನ ಸಾಮರ್ಥ್ಯದಲ್ಲಿಲ್ಲ. ಈಗ, ನಾನು ಈ ಹೋರಾಟದಿಂದ ಮುಕ್ತನಾಗಲು ಬಯಸುತ್ತೇನೆ. ಈ ಸಮಯದಲ್ಲಿ ನಾನು ಮಾಡಬಹುದಾದ ಯಾವುದೇ ತಪ್ಪುಗಳಿಗೆ ಎಲ್ಲರೂ ನನ್ನನ್ನು ಕ್ಷಮಿಸಬೇಕು. ಈಗ ನಾನು ನಿಮ್ಮೆಲ್ಲರಿಗೂ ಸೇವೆ ಸಲ್ಲಿಸಲು ಸಮರ್ಥನಲ್ಲ. ಈ ಟಿಕೆಟ್ ವ್ಯವಸ್ಥೆಯಿಂದ ನನಗೆ ತೊಂದರೆಯಾಗಿದೆ. ನಾನು ಎಲ್ಲರನ್ನೂ ನಂಬಿದ್ದೆ ಎಂದು ಬೇಸರ ಹೊರಹಾಕಿದ್ದಾರೆ.
ಈ ವೀಡಿಯೊ ಬಿಹಾರದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಎನ್ಡಿಎ ಮೈತ್ರಿಕೂಟದೊಳಗಿನ ಅಭ್ಯರ್ಥಿಗಳ ಆಯ್ಕೆಯಲ್ಲಿನ ಪಾರದರ್ಶಕತೆಯನ್ನು ಅನೇಕರು ಪ್ರಶ್ನಿಸಿದ್ದಾರೆ.