ಬೇಲೂರಿನ ಘಟನೆ ಮಾಸುವ ಮುನ್ನವೇ ಮತ್ತೊಂದು ವಿವಾದ: ಚಿಕ್ಕಬಳ್ಳಾಪುರದಲ್ಲಿ ಗಂಗಮ್ಮ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ ಮಾಡಿದ ಅನ್ಯ ಕೋಮಿನ ಮಹಿಳೆಯರು!

ಚಿಕ್ಕಬಳ್ಳಾಪುರ: ಹಾಸನ (Hassan) ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಗಣೇಶ ಮೂರ್ತಿ ಮೇಲೆ ಚಪ್ಪಲಿ ಇಟ್ಟಿರುವ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ (Chikkaballapur) ಅನ್ಯ ಕೋಮಿನ ಮಹಿಳೆಯರು (Women), ದೇವರ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ ಮಾಡಿರುವ ಘಟನೆ ನಡೆದಿದೆ. ಹೌದು.. ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಸಾಗರ ಜಲಾಶಯದ ಬಳಿ ಇರುವ ಗಂಗಮ್ಮ ವಿಗ್ರಹದ ಮೇಲೆ ಅನ್ಯಕೋಮಿನ ಮಹಿಳೆಯರು ಕಾಲಿಟ್ಟು ಸ್ನಾನ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಮೇಲಿನಿಂದ ಧುಮುಕುವ ನೀರಿನಲ್ಲಿ ಮೋಜು ಮಸ್ತಿ ಮಾಡುವ ಸಂದರ್ಭದಲ್ಲಿ ಮಹಿಳೆಯರು ಗಂಗಮ್ಮ ದೇವರ ವಿಗ್ರಹದ ಮೇಲೆ ಕಾಲಿಟ್ಟು ಸ್ನಾನ ಮಾಡಿದ್ದಾರೆ. ಆಕಸ್ಮಿಕವೋ ದುರುದ್ದಶವೋ ಗೊತ್ತಿಲ್ಲ. ಕಳೆದ ಮೂರು ದಿನಗಳ ಹಿಂದೆ ಜಲಾಶಯಕ್ಕೆ ಬಂದವರಿಂದ ಈ ಕೃತ್ಯ ನಡೆದಿದ್ದು, ಯಾವುದರ ಮೇಲೆ ನಿಂತು ಸ್ನಾನ ಮಾಡುತ್ತಿದ್ದೇವೆ ಎನ್ನುವುದನ್ನು ಮಹಿಳೆಯರು ಅರಿತುಕೊಳ್ಳಬೇಕಿತ್ತು. ಆದ್ರೆ, ಮೋಜು ಮಸ್ತಿಯಲ್ಲಿ ಅದ್ಯಾವುದು ಅವರಿಗೆ ಕಂಡಿಲ್ಲ.
ಗಂಗಮ್ಮ ವಿಗ್ರಹದ ಮೇಲೆ ನಿಂತು ಸ್ನಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಹಿಂದೂಗಳ ಭಾವನಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಈ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ, ಮುಂದೆ ಈ ಪ್ರಕರಣ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.