ಮಧ್ಯಪ್ರದೇಶದ ಸಿರಪ್ ದುರಂತ: “ಕಿಮ್ಸ್ನಲ್ಲಿ ಮಾರಕ ಸಿರಪ್ ಬಳಕೆ ಇಲ್ಲ”- ಪಾಲಕರು ಆತಂಕಪಡುವ ಅಗತ್ಯವಿಲ್ಲ ಎಂದ ಹುಬ್ಬಳ್ಳಿ ಕಿಮ್ಸ್

ಮಧ್ಯಪ್ರದೇಶದಲ್ಲಿ ಕಫ್ ಸಿರಪ್ ಸೇವನೆಯಿಂದಾಗಿ 12 ಮಕ್ಕಳು ಅಸುನೀಗಿದ್ದರು. ಈ ಘಟನೆ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ, ರಾಜ್ಯದ ಪಾಲಕರಲ್ಲಿಯೂ ಆತಂಕ ಮೂಡಿಸಿದೆ. ಹುಬ್ಬಳ್ಳಿಯ ಕಿಮ್ಸ್ ಈ ಕುರಿತ ಸ್ಪಷ್ಟನೆ ನೀಡಿ, ಆಸ್ಪತ್ರೆಯಲ್ಲಿ ಯಾವುದೇ ಮಾರಕ ಸಿರಪ್ ಬಳಕೆಯಿಲ್ಲ ಎಂದಿದೆ. ಅಷ್ಟೇ ಅಲ್ಲದೇ ಈ ವಿಷಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕೋಲ್ಡ್ರಿಪ್ ಕೆಮ್ಮು ಸಿರಪ್ (Coldrif Cough syrup) ಸೇವನೆಯಿಂದ ಮಧ್ಯಪ್ರದೇಶದಲ್ಲಿ ಅನೇಕ ಮಕ್ಕಳ ಸಾವು ದೇಶದ ಜನರನ್ನು ಬೆಚ್ಚಿಬೀಳಿಸಿದೆ. ಇದು ರಾಜ್ಯದ ಜನರಲ್ಲಿ ಕೂಡಾ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಹುಬ್ಬಳ್ಳಿ ಕಿಮ್ಸ್ನಲ್ಲಿ (KIMS Hubli) ಕೂಡಾ ಹೆಚ್ಚಿನ ಪಾಲಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ಹುಬ್ಬಳ್ಳಿ ಕಿಮ್ಸ್ನಲ್ಲಿಇಲ್ಲಿವರಗೆ ಈ ಅಪಾಯಕಾರಿ ಸಿರಪ್ ಬಳಕೆ ಮಾಡಿಲ್ಲಾ. ಹೀಗಾಗಿ ಯಾರು ಆತಂಕ ಪಡಬಾರದು ಎಂದು ಕಿಮ್ಸ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದರ ಜೊತೆಗೆ ಕಿಮ್ಸ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಕಿಮ್ಸ್ನಲ್ಲಿ ಮಾರಕ ಸಿರಪ್ನ ಬಳಕೆ ಎಂದಿಗೂ ಮಾಡಿಲ್ಲ
ಮಧ್ಯಪ್ರದೇಶದಲ್ಲಿ ಕೋಲ್ಡ್ರಿಪ್ ಕೆಮ್ಮು ಸಿರಪ್ ಹುಟ್ಟಿಸಿರುವ ಆತಂಕ, ರಾಜ್ಯದ ಜನರಿಗೂ ವ್ಯಾಪಿಸಿದೆ. ಈಗಾಗಲೇ ಅಲ್ಲಿ ಮಕ್ಕಳ ಸರಣಿ ಸಾವುಗಳು,ಪಾಲಕರನ್ನು ಹೈರಾಣಾಗಿಸಿದೆ.ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ಹುಬ್ಬಳ್ಳಿಯ ಕಿಮ್ಸ್ಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಇದೇ ಆಸ್ಪತ್ರೆಯಲ್ಲಿ ಪ್ರತಿನಿತ್ಯ ನೂರಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಸರಿಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳು ಒಳ ಮತ್ತು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಇಂತಹ ಆಸ್ಪತ್ರೆಯಲ್ಲಿ ಕೂಡಾ ಮಧ್ಯಪ್ರದೇಶದಲ್ಲಿ ನಡೆದ ಸರಣಿ ಸಾವು ಪ್ರಕರಣಗಳು ಆತಂಕ ಹುಟ್ಟಿಸಿದ್ದವು. ಆದರೆ ಜನರ ಆತಂಕವನ್ನು ನಿವಾರಿಸುವ ಕೆಲಸವನ್ನು ಹುಬ್ಬಳ್ಳಿ ಕಿಮ್ಸ್ ಮಾಡುತ್ತಿದೆ.
ಹುಬ್ಬಳ್ಳಿ ಕಿಮ್ಸ್ನಲ್ಲಿ ಕೆಮ್ಮು ಸಿರಪ್ ನಿಂದ ಇಲ್ಲಿಯವರಗೆ ಯಾವುದೇ ತೊಂದರೆಯಾಗಿರುವ ಒಂದೇ ಒಂದು ಘಟನೆ ಕೂಡಾ ನಡೆದಿಲ್ಲ.ಇನ್ನು ಅಪಾಯಕಾರಿ ಕೋಲ್ಡ್ರಿಪ್ ಸಿರಪ್ ನ್ನು ಹುಬ್ಬಳ್ಳಿ ಕಿಮ್ಸ್ ಗೆ ಇಲ್ಲಿವರಗೆ ತರಿಸಿಲ್ಲ. ‘ನಮ್ಮ ಔಷಾಧಾಲಯದ ಸ್ಟಾಕ್ ನಲ್ಲಿ ಈ ಸಿರಪ್ ಇಲ್ಲ.ಸರಣಿ ಸಾವಿಗೆ ಕಾರಣವಾಗಿರುವ ಕೋಲ್ಡ್ರಿಪ್ ಸಿರಪ್ ಆಗಲಿ, ಅದರ ಕಾಂಬಿನೇಷನ್ ಹೊಂದಿರುವ ಬೇರೆ ಯಾವುದೇ ಸಿರಪ್ ಕಿಮ್ಸ್ ನಲ್ಲಿ ಇಲ್ಲ. ಹೀಗಾಗಿ ಯಾರು ಆತಂಕ ಪಡಬಾರದು’ ಎಂದು ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹಿರಿಯ ವೈದ್ಯರ ಸಲಹೆ ಪಡೆದು ಸಿರಪ್ ಬರೆದುಕೊಡುವಂತೆ ಕಿಮ್ಸ್ ವೈದ್ಯರಿಗೆ ಸಂದೇಶ
ಹುಬ್ಬಳ್ಳಿ ಕಿಮ್ಸ್ನಲ್ಲಿ ಕೆಮ್ಮಿಗೆ ಬೇರೆ ಬೇರೆ ರೀತಿಯ ಸಿರಪ್ ಗಳಿದ್ದು, ಅವುಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಯಾವುದಾದರೂ ಅಪಾಯಕಾರಿ ಔಷಧ ಎನಿಸಿದರೆ ಅವುಗಳನ್ನು ಟೆಸ್ಟ್ ಮಾಡಿಸಿ ಬಳಕೆ ಮಾಡಲಾಗುತ್ತಿದೆ. ಇದಷ್ಟೇ ಅಲ್ಲ ಮಧ್ಯಪ್ರದೇಶದ ಘಟನೆ ನಂತರ ಎಚ್ಚೆತ್ತಿರುವ ಹುಬ್ಬಳ್ಳಿ ಕಿಮ್ಸ್, ಇಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಕೇಂದ್ರ ಸರ್ಕಾರ ಎಚ್ಚರಿಕೆ
ಅದರಂತೆಯೇ, ಮಕ್ಕಳಿಗೆ ಕೆಮ್ಮಿನ ಸಿರಪ್ ನ್ನು ಬರೆದುಕೊಡುವಾಗ ಹಿರಿಯ ವೈದ್ಯರ ಸಲಹೆಯನ್ನು ಪಡೆದು ಬರೆದುಕೊಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಅಪಾಯಕಾರಿ ಅಂಶಗಳು ಇರುವ ಯಾವುದೇ ಸಿರಪ್ ಗಳನ್ನು ಕೂಡಾ ಪಾಲಕರಿಗೆ ಸೂಚಿಸಬಾರದು ಎಂದು ಎಲ್ಲಾ ವೈದ್ಯರಿಗೆ ಸಂದೇಶ ನೀಡಲಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೂಡಾ ನಿನ್ನೆ ಮೀಟಿಂಗ್ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಕ್ಕಳ ವಿಭಾಗದ ವೈದ್ಯರಿಗೆ ಸೂಚನೆ ನೀಡಲಾಗಿದೆ. ಹುಬ್ಬಳ್ಳಿ ಕಿಮ್ಸ್ ಇಂತಹ ವಿಷಯದಲ್ಲಿ ಹೆಚ್ಚು ಜಾಗೃತಿ ವಹಿಸುತ್ತಿರುವದು ಮಕ್ಕಳ ಪಾಲಕರ ಮೆಚ್ಚುಗೆಗೆ ಕಾರಣವಾಗಿದೆ.