ಕಾರಿನಲ್ಲಿ ಯುವಕನನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ಒಂದು ಚಿನ್ನದ ಅಂಗಡಿಯ ಕಚೇರಿ ಕೆಲಸಗಾರರಾದ ಮುಸ್ತಫಾ ಎಂಬುವವರನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ, ಬರೋಬ್ಬರಿ ₹1.5 ಕೋಟಿ ರೂಪಾಯಿ ಮೌಲ್ಯದ 1650 ಗ್ರಾಂ (1.65 ಕೆಜಿ) ಚಿನ್ನದ ಗಟ್ಟಿಯನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 26, 2025ರ ರಾತ್ರಿ ಈ ಘಟನೆ ನಡೆದಿದ್ದು, ಮುಸ್ತಫಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಚಿನ್ನದ ಗಟ್ಟಿಯನ್ನು ಶುದ್ಧೀಕರಣಕ್ಕಾಗಿ ಕಾರ್ ಸ್ಟ್ರೀಟ್ನಲ್ಲಿರುವ ಅಂಗಡಿಯೊಂದಕ್ಕೆ ಸಾಗಿಸುತ್ತಿದ್ದರು. ಕಾರ್ ಸ್ಟ್ರೀಟ್ನಲ್ಲಿರುವ ವೆಂಕಟರಮಣ ದೇವಸ್ಥಾನದ ಬಳಿ ಇಬ್ಬರು ದುಷ್ಕರ್ಮಿಗಳು ಮೋಟಾರ್ಸೈಕಲ್ನಲ್ಲಿ ಬಂದು ಅವರನ್ನು ಅಡ್ಡಗಟ್ಟಿ ಗೊಂದಲ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ, ಕಾರಿನಲ್ಲಿ ಬಂದ ನಾಲ್ಕು ಜನ ಅನುಮಾನಾಸ್ಪದ ವ್ಯಕ್ತಿಗಳು ಮುಸ್ತಫಾ ಅವರನ್ನು ಬಲವಂತವಾಗಿ ಕಾರಿಗೆ ಎಳೆದು ಅಪಹರಿಸಿದ್ದಾರೆ.
ಅಪಹರಣದ ಸಮಯದಲ್ಲಿ ಚಿನ್ನ ಎಲ್ಲಿದೆ ಎಂದು ಕೇಳಿ ತಿಳಿದುಕೊಂಡ ನಂತರ, ಆರೋಪಿಗಳು ಮುಸ್ತಫಾ ಅವರ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಟ್ಟಿದ್ದ ಚಿನ್ನದ ಗಟ್ಟಿಯನ್ನು ಕಾರಿಗೆ ವರ್ಗಾಯಿಸಿಕೊಂಡು, ಮುಸ್ತಫಾ ಅವರನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಓಡಿಹೋಗಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸುಳಿವುಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.