ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ಹುಡುಕಲು 80 ಕಿಮೀ ಪ್ರಯಾಣಿಸಿದ ಶಿಕ್ಷಕಿ, ಶಿಕ್ಷಣಾಧಿಕಾರಿಗಳಿಂದ ಮೆಚ್ಚುಗೆ

ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರದ ಆದೇಶದ ಮೂಲಕ ಹುಡುಕಿ ವರದಿ ಮಾಡಲೇಬೇಕಿರುವ ಹಿನ್ನೆಲೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಮಕ್ಕಳ ಜಾಡು ಹಿಡಿದು 80 ಕಿಮೀ ಸಂಚರಿಸಿ ಆ ಮಕ್ಕಳನ್ನು ಪತ್ತೆ ಹಚ್ಚಿದ ವಿಚಿತ್ರ ಘಟನೆ ಶನಿವಾರದಂದು ನಡೆದಿದೆ.

ತಾಲೂಕಿನ ಹೊನ್ನೇಸರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲೆ ಬಿಟ್ಟು ಪರವೂರಿಗೆ ಹೋಗಿದ್ದಾರೆ.
ಈ ವರ್ಷ ಈ ಇಬ್ಬರು ವಿದ್ಯಾರ್ಥಿಗಳು ಶಾಲೆ ಪ್ರಾರಂಭವಾದಾಗಿನಿಂದ ತರಗತಿಗೆ ಹಾಜರಾಗಿರಲಿಲ್ಲ. ಯಾವ ಮಗುವೂ ಶಾಲೆಯಿಂದ ಹೊರಗೆ ಇರಬಾರದು ಎನ್ನುವ ಇಲಾಖೆಯ ನಿಯಮದ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹತ್ತಾರು ಬಾರಿ ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳ ಜೊತೆ ಪೋಷಕರು ಸಹ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಪೋಷಕರು ದೂರವಾಣಿ ಕರೆಗೆ ಸಹ ಸಿಗುತ್ತಿರಲಿಲ್ಲ.
ಮಕ್ಕಳು ಗೈರು ಹಾಜರಾಗಿರುವ ಕುರಿತು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದರು. ಮಕ್ಕಳ ಪತ್ತೆಗಾಗಿ ಪ್ರಯತ್ನ ನಡೆದಿತ್ತು. ಈ ನಡುವೆ ಶಾಲೆಯ ಹಿರಿಯ ಶಿಕ್ಷಕಿ ಜಯಂತಿ ಎಚ್.ವಿ. ಅವರಿಗೆ ಮಕ್ಕಳು ಪೋಷಕರ ಜೊತೆ ಹೊನ್ನೇಸರದಿಂದ ೮೦ ಕಿಮೀ ದೂರದಲ್ಲಿರುವ ಹೊಸನಗರ ತಾಲೂಕಿನ ಸಂಪೆಕಟ್ಟೆಯ ಕುಂಬಾರಗೊಳಿ ಎನ್ನುವ ಗ್ರಾಮದಲ್ಲಿ ಇರುವುದು ತಿಳಿದು ಬಂದಿದೆ.
ಶಿಕ್ಷಕಿ ಜಯಂತಿ ಅವರು ಶನಿವಾರ ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡು ಕುಂಬಾರಗೊಳಿಗೆ ಹೋಗಿ, ಸ್ಥಳೀಯರ ಮೂಲಕ ವಿದ್ಯಾರ್ಥಿಗಳು ಇರುವ ಮನೆ ಪತ್ತೆ ಹಚ್ಚಿದ್ದಾರೆ. ಮಕ್ಕಳ ತಾಯಿ ಉಷಾ ಹಾಗೂ ಅವರ ಬಂಧುಗಳಿಗೆ ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳನ್ನು ಶಾಲೆ ಬಿಡಿಸದಂತೆ ಮನವರಿಕೆ ಮಾಡಿದ್ದಾರೆ.
ನಂತರ ಪೋಷಕರು ಐದನೇ ತರಗತಿ ವಿದ್ಯಾರ್ಥಿ ಸುಶಾನ್ ಹಾಗೂ 3ನೇ ತರಗತಿ ಓದುತ್ತಿದ್ದ ಸಾನ್ವಿ ಅವರನ್ನು ಶಾಲೆಗೆ ಕಳಿಸಲು ಒಪ್ಪಿದ್ದಾರೆ. ಒಟ್ಟು 160ಕಿಮೀ ಓಡಾಟ ನಡೆಸಿ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವಲ್ಲಿ ಶ್ರಮಿಸಿದ ಶಿಕ್ಷಕಿ ಜಯಂತಿ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.