ಎಟಿಎಂ ದರೋಡೆ ಯತ್ನ – ರೆಡ್ ಹ್ಯಾಂಡ್ ಬಂಧನ ದೃಶ್ಯ ವೈರಲ್

ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಸರಣಿ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕಳ್ಳನೋರ್ವ ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನಿಸುತ್ತಿರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಎಟಿಎಂ ದರೋಡೆ ಮಾಡಲು ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿರುವಂತಹ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ರೆಡ್ ಹ್ಯಾಂಡ್ ಆಗಿ ಹಿಡಿದ ಬಳ್ಳಾರಿಯ ಗಸ್ತು ಪೊಲೀಸರು :
ಎಟಿಎಂ ದರೋಡೆ ಮಾಡಲು ಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿರುವಂತಹ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಮಧ್ಯರಾತ್ರಿ ಎಟಿಎಂಗೆ ನುಗ್ಗಿ ಕಳವು ಮಾಡಲು ಮುಂದಾದವನನ್ನು ರಾತ್ರಿ ಬೀಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಳ್ಳಾರಿಯ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳ್ಳತನ ಮಾಡಲೆತ್ನಿಸಿದಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಆಂಧ್ರ ಪ್ರದೇಶದ ಅನಂತಪುರದ ವೆಂಕಟೇಶ್(22) ಎಂದು ಗುರುತಿಸಲಾಗಿದೆ. ವೆಂಕಟೇಶ್ ಮೂಲತಃ ಬಳ್ಳಾರಿಯವನಾಗಿದ್ದಾನೆ.ಅಂದು ರಾತ್ರಿ ಮದ್ಯ ಸೇವಿಸಲು ಹಣದ ಕೊರತೆ ಉಂಟಾದ ಕಾರಣ ಎಟಿಎಂ ಕಳ್ಳತನ ಮಾಡಲು ಮುಂದಾಗಿದ್ದಾನೆ.
ಪೊಲೀಸ್ ಕಾರ್ಯಾಚರಣೆಯ ರೋಚಕ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ :
ಆರೋಪಿ ವೆಂಕಟೇಶ್ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳವು ಮಾಡಲು ಯತ್ನಿಸಿದ್ದಾನೆ. ಎಟಿಎಂ ಬಾಕ್ಸ್ ಹೊತ್ತೊಯ್ಯಲು ಯತ್ನಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಎಎಸ್ಐ ಮಲ್ಲಿಕಾರ್ಜುನ ಕಾರ್ಯಾಚರಣೆಗೆ ಧಾವಿಸಿದ್ದು, ಬೀಟಿನ ಇತರ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಖದೀಮ ಎಟಿಎಂ ಒಳಗೆ ಇರುವುದು ಕಾಣಿಸಿದೆ. ತಕ್ಷಣವೇ ಎಟಿಎಂ ಒಳ ಧಾವಿಸಿದ ಎಎಸ್ಐ ಮಲ್ಲಿಕಾರ್ಜುನ ಕಳ್ಳನನ್ನು ಬಂಧಿಸಲು ಯತ್ನಿಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ತೀವ್ರ ಜಟಾಪಟಿಯಾಗಿದೆ.
ಪೊಲೀಸ್ ಕಾರ್ಯಾಚರಣೆಯ ಸಿಸಿಟಿವಿಯಲ್ಲಿ ರೇಕಾರ್ಡ್ :
ಸ್ವಲ್ಪ ಯಾಮಾರಿದರೂ ಆರೋಪಿಯು ಪೊಲೀಸರ ಮೇಲೆ ಭಯಾನಕ ದಾಳಿ ಮಾಡುತ್ತಿದ್ದ. ಆದರೆ, ಅಷ್ಟರಲ್ಲಿ ರಾತ್ರಿ ಬೀಟಿನ ಮತ್ತೊಬ್ಬ ಕಾನ್ಸ್ಟೇಬಲ್ ನಿಂಗಪ್ಪ ಎಎಸ್ಐ ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಆರೋಪಿ ವೆಂಕಟೇಶನನ್ನು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಳ್ಳಾರಿಯ ರಾತ್ರಿ ಬೀಟ್ ಪೊಲೀಸರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಬಳ್ಳಾರಿ ಎಸ್ಪಿ ಡಾ. ಶೋಭಾರಾಣಿ ಪೊಲೀಸರ ಕಾರ್ಯಕ್ಕೆ ಮೆಚ್ಚಿ ಸನ್ಮಾನಿಸಿ, ಅಭಿನಂದಿಸಿದ್ದಾರೆ.