ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಒಪ್ಪಂದ ಜಾರಿ ಮಾಡುವಂತೆ ಭಾರತಕ್ಕೆ ಮನವಿ

ಇಸ್ಲಾಮಾಬಾದ್: ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಪರಮಾಣು ಬಾಂಬ್ ಬೆದರಿಕೆ ಬೆನ್ನಲ್ಲೇ ಪಾಕಿಸ್ತಾನವು ಸಿಂಧೂ ನದಿ ನೀರು ಒಪ್ಪಂದವನ್ನು ಕಾರ್ಯಗತಗೊಳಿಸುವಂತೆ ಬಿಡುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದೆ. ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಸಿಂಧೂ ನದಿ ಒಪ್ಪಂದವನ್ನು ಭಾರತವು ರದ್ದು ಮಾಡಿತ್ತು.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಸೋಮವಾರ ಮನವಿ ಮಾಡಿದ್ದು, ಕೂಡಲೇ ಸಿಂಧೂ ನದಿ ಒಪ್ಪಂದ ಬಗ್ಗೆ ಮಾತುಕತೆ ಆರಂಭಿಸುವಂತೆ ಕೇಳಿಕೊಂಡಿದೆ.
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಆಗಸ್ಟ್ 8ರಂದು ಮಧ್ಯಸ್ಥಿಕೆ ನ್ಯಾಯಾಲಯವು ಮಾಡಿರುವ ವ್ಯಾಖ್ಯಾನವನ್ನು ಸ್ವಾಗತಿಸಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿ, ಸಿಂಧೂ ಜಲ ಒಪ್ಪಂದದ ಸಾಮಾನ್ಯ ಕಾರ್ಯನಿರ್ವಹಣೆಯನ್ನು ತಕ್ಷಣವೇ ಪುನರಾರಂಭಿಸುವಂತೆ ಭಾರತವನ್ನು ಸೋಮವಾರ ವಿನಂತಿಸಿದೆ. ಪಾಕಿಸ್ತಾನದ ಕಡೆಗೆ ಪಶ್ಚಿಮಕ್ಕೆ ಹರಿಯುವ ನದಿಗಳ ಹರಿವಿಗೆ ಯಾವುದೇ ತಡೆಯೊಡ್ಡದೇ ಹರಿಯಲು ಬಿಡಬೇಕು ಎಂದು ಕೋರ್ಟ್ ವ್ಯಾಖ್ಯಾನಿಸಿದೆ ಎಂದು ಟ್ವಿಟರ್ನಲ್ಲಿ ತಿಳಿಸಿದೆ.
ಸಿಂಧೂ ನದಿಗಾಗಿ ರಕ್ತ ಹರಿಯಲಿದೆ ಎಂದು ಕೆಲವು ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿದ್ದರು. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಮಾತನಾಡಿದ್ದ ಪಾಕ್ ಸೇನಾ ಮುಖ್ಯಸ್ಥ ಮುನೀರ್, ಭಾರತವೇನಾದರೂ ಸಿಂಧೂ ನದಿಗೆ ಅಣೆಕಟ್ಟೆ ಕಟ್ಟಿದರೆ ಅದನ್ನು 10 ಕ್ಷಿಪಣಿಗಳ ಮೂಲಕ ಹೊಡೆದುರುಳಿಸುವುದಾಗಿ ಹೇಳಿಕೊಂಡಿದ್ದರು.
ಲಾಡೆನ್ ವೇಷದಲ್ಲಿ ಮುನೀರ್: ಅಮೆರಿಕದ ಮಾಜಿ ಅಧಿಕಾರಿ
ವಾಷಿಂಗ್ಟನ್: ಪರಮಾಣು ಬಾಂಬ್ ಬೆದರಿಕೆ ಹಾಕಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ಗೆ ತಿರುಗೇಟು ನೀಡಿರುವ ಅಮೆರಿಕದ ರಕ್ಷಣಾ ಕಚೇರಿಯ ಮಾಜಿ ಅಧಿಕಾರಿ ಮೈಕೆಲ್ ರುಬಿನ್, ಪಾಕಿಸ್ತಾನವು ಬೆದರಿಕೆ ರಾಷ್ಟ್ರದ ರೀತಿಯಲ್ಲಿ ವರ್ತಿಸುತ್ತಿದೆ. ಅಲ್ಲದೆ, ಮುನೀರ್ ಉಗ್ರ ಲಾಡೆನ್ ವೇಷದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಅಮೆರಿಕದಲ್ಲಿ ನೆಲದಲ್ಲಿ ನಿಂತುಕೊಂಡು ಪರಮಾಣು ಬಾಂಬ್ಬೆದರಿಕೆ ಹಾಕಿದ್ದನ್ನು ಸ್ವೀಕರಿಸಲಾಗದು ಎಂದು ಅವರು ತಿಳಿಸಿದ್ದಾರೆ.