ನಟ ಅರ್ಜುನ್ ಯೋಗಿ ಕಾರು ಅಪಘಾತ: ಪವಾಡ ಸದೃಶವಾಗಿ ಪಾರು

ಬೆಂಗಳೂರು: ಸ್ಯಾಂಡಲ್ವುಡ್ ನಟ ಅರ್ಜುನ್ ಯೋಗಿ (Actor Arjun Yogi) ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಆರ್ ಆರ್ ನಗರದ ಚನ್ನಸಂದ್ರದ ಸಮೀಪ ಸೋಮವಾರ (ಆ.11) ಮುಂಜಾನೆ ನಡೆದಿರುವುದು ವರದಿಯಾಗಿದೆ.

ಅರ್ಜುನ್ ಯೋಗಿ ಅವರು ತನ್ನ ಸ್ನೇಹಿತರ ಜತೆ ದೇವಸ್ಥಾನಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅವರ ಕಾರಿಗೆ ನಾಯಿ ಅಡ್ಡ ಬಂದ ಕಾರಣ, ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾರು ಢಿಕ್ಕಿ ಹೊಡೆದಿದೆ. ಏರ್ ಬ್ಯಾಗ್ ಓಪನ್ ಆದ ಕಾರಣ ಯಾವುದೇ ಅವಘಡ ಸಂಭವಿಸದೆ ನಟ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗದ ಗಾಜು ಪುಡಿಯಾಗಿದ್ದು, ಮುಂಭಾಗ ನಜ್ಜುಗುಜ್ಜಾಗಿದೆ.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿರುವ ಅರ್ಜುನ್ ಯೋಗಿ, ʼಲಾಂಗ್ ಡ್ರೈವ್ʼ, ʼಅನಾವರಣʼ, ʼಚೇಜ್ʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.
ʼಅರಮನೆ ಗಿಳಿʼ, ʼಶಾಂತಿ ನಿವಾಸʼ ಮುಂತಾದ ಸೀರಿಯಲ್ನಲ್ಲಿ ಅರ್ಜುನ್ ನಟಿಸಿದ್ದಾರೆ. ʼರಾಜಾ ರಾಣಿʼ ಶೋನಲ್ಲೂ ಅರ್ಜುನ್ ಹೆಜ್ಜೆ ಹಾಕಿದ್ದರು.
ಸದ್ಯ ಅವರು ʼವರ್ಣʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ನಟನೆ ಮಾತ್ರವಲ್ಲದೆ ಟೆಲಿವಿಷನ್ ಪ್ರಿಮಿಯರ್ ಲೀಗ್, ಕರ್ನಾಟಕ ಸೆಲೆಬ್ರಿಟಿ ಲೀಗ್, ಸಿಸಿಎಲ್ನಲ್ಲೂ ಅರ್ಜುನ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ.