ಆಡುಜೀವಿತಂ’ಗೆ ರಾಷ್ಟ್ರೀಯ ಪ್ರಶಸ್ತಿ ಇಲ್ಲ: ಆಯ್ಕೆ ಸಮಿತಿ ಅಧ್ಯಕ್ಷ ಆಶುತೋಷ್ ವಿರುದ್ಧ ನಿರ್ದೇಶಕ ಬ್ಲೆಸ್ಸಿ ಆರೋಪ

ಇತ್ತೀಚೆಗಷ್ಟೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆ ಮಾಡಲಾಯ್ತು. ’12ತ್ ಫೇಲ್’ಗೆ ಅತ್ಯುತ್ತಮ ಸಿನಿಮಾ, ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಕ್ಕೆ ಅತ್ಯುತ್ತಮ ನಿರ್ದೇಶಕ ಮತ್ತು ಸಿನಿಮಾಟೊಗ್ರಫಿ ಪ್ರಶಸ್ತಿಗಳನ್ನು ನೀಡಲಾಯ್ತು. ನಟ ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮಾಸಿಗೆ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ನೀಡಲಾಯ್ತು.

ಆದರೆ ಮಲಯಾಳಂನ ‘ಆಡುಜೀವಿತಂ’ ಸಿನಿಮಾಕ್ಕೆ ಯಾವುದೇ ವಿಭಾಗದಲ್ಲಿ ಒಂದೇ ಒಂದು ಪ್ರಶಸ್ತಿ ಸಹ ಸಿಗಲಿಲ್ಲ. ಇದು ಸಹಜವಾಗಿಯೇ ಸಿನಿಮಾ ಪ್ರೇಮಿಗಳಿಗೆ ಆಶ್ಚರ್ಯ ತಂದಿದೆ. ಇದೀಗ ‘ಆಡುಜೀವಿತಂ’ ನಿರ್ದೇಶಕ ಬ್ಲೆಸ್ಸಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಆಶುತೋಶ್ ಅವರ ಇಬ್ಭಗೆ ವ್ಯಕ್ತಿತ್ವವನ್ನು ಬಹಿರಂಗ ಪಡಿಸಿದ್ದಾರೆ.
ನಿರ್ದೇಶಕ ಬ್ಲೆಸ್ಸಿ ಹೇಳಿರುವಂತೆ ‘ಆಡುಜೀವಿತಂ’ ಸಿನಿಮಾವನ್ನು ಈ ಮೊದಲು ವೀಕ್ಷಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಆಶುತೋಷ್ ಗೊವರೀಕರ್ ಸಿನಿಮಾ ಅನ್ನು 1962 ಕ್ಲಾಸಿಕ್ ಹಾಲಿವುಡ್ ಸಿನಿಮಾ, ಏಳು ಆಸ್ಕರ್ ಗೆದ್ದಿರುವ ‘ಲಾರೆನ್ಸ್ ಆಫ್ ಅರೆಬಿಯಾ’ಕ್ಕೆ ಹೋಲಿಸಿದ್ದರಂತೆ. ಸಿನಿಮಾ ಅನ್ನು ಬಹುವಾಗಿ ಕೊಂಡಾಡಿದ್ದ ಆಶುತೋಷ್ ಗೋವರೀಕರ್, ಬೆಸ್ಲಿಯನ್ನು ಮನೆಗೆ ಊಟಕ್ಕೆ ಸಹ ಆಹ್ವಾನಿಸಿದ್ದರಂತೆ. ಆದರೆ ಬೆಸ್ಲಿ ಬೇರೆಡೆ ತೆರಳಬೇಕಾಗಿದ್ದ ಕಾರಣಕ್ಕೆ ಹೋಗಲು ಆಗಿರಲಿಲ್ಲವಂತೆ. ಆದರೆ ಈಗ ಅದೇ ವ್ಯಕ್ತಿ ‘ಆಡುಜೀವಿತಂ’ ಸಿನಿಮಾ ಅನ್ನು ಯಾವೊಂದು ವಿಭಾಗದಲ್ಲಿಯೂ ಸಹ ಪ್ರಶಸ್ತಿಗೆ ಪರಿಗಣಿಸಿಲ್ಲ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಮಲಯಾಳಂ ಚಿತ್ರಕರ್ಮಿ ಪ್ರದೀಪ್ ನಾಯರ್, ಸಂದರ್ಶನವೊಂದರಲ್ಲಿ ಮಾತನಾಡಿ, ‘ಜ್ಯೂರಿ ಅಧ್ಯಕ್ಷ ಅಶುತೋಷ್ ಗೋವಾರಿಕರ್ ಈ ಹಿಂದೆ ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ‘ಆಡುಜೀವಿತಂ’ ಸಿನಿಮಾ ನೋಡಿದ್ದರು ಮತ್ತು ಚಿತ್ರವನ್ನು ಅಳವಡಿಸಿಕೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗೋವಾರಿಕರ್ ಮತ್ತು ಆಯ್ಕೆ ಸಮಿತಿಯ ಇತರರು ಸಹ ರೂಪಾಂತರದಲ್ಲಿ ಸ್ವಂತಿಕೆಯ ಕೊರತೆಯಿದೆ ಮತ್ತು ನಟನೆ ಕೃತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದಿದ್ದಾರೆ.