ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್: ಕೊಪ್ಪಳದ ಯುವಕ ಸೈಬರ್ ಪೊಲೀಸರ ಬಲೆಗೆ

ಕೊಪ್ಪಳ: ಸ್ಯಾಂಡಲ್ವುಡ್ ಕ್ವೀನ್ ರಮ್ಯಾಗೆಅಶ್ಲೀಲ ಕಾಮೆಂಟ್ ಹಾಕಿದವರ ಪೈಕಿ ಓರ್ವ ಯುವಕನನ್ನು ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಯುವಕನನ್ನು ಕೊಪ್ಪಳದ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದ ಮಂಜುನಾಥ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಎಂಬ ನಾಲ್ವರನ್ನು ಬಂಧಿಸಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೂ ಸಿಸಿಬಿ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
