ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಮಹತ್ವದ ಕ್ರಮ: ಹಾಸ್ಟೆಲ್ ಫ್ಯಾನ್ಗಳಿಗೆ “ಆಂಟಿ-ಸೂಸೈಡ್ ಡಿವೈಸ್” ಅಳವಡಿಕೆಗೆ RGUHS ಚಿಂತನೆ

ಮಂಡ್ಯ: ಕಳೆದ 13 ದಿನಗಳಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಸತಿ ನಿಲಯದಲ್ಲಿ ಓರ್ವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಎಲ್ಲ ವೈದ್ಯಕೀಯ ಸಂಸ್ಥೆಗಳ ಹಾಸ್ಟೆಲ್ಗಳಲ್ಲಿ ಸೀಲಿಂಗ್ ಫ್ಯಾನ್ಗಳಿಗೆ ಆತ್ಮಹತ್ಯೆ ವಿರೋಧಿ ’ (ಆಯಂಟಿ ಸೂಸೈಡ್ ಡಿವೈಸ್) ಸಾಧನ ಅಳವಡಿಕೆಗೆ ಚಿಂತನೆ ನಡೆಸಿದೆ.

ಸದ್ಯ ಮಿಮ್ಸ್ನಲ್ಲಿ ಅಳವಡಿಸಲು ಮುಂದಾಗಿದೆ.
ಮಿಮ್ಸ್ನ ವಸತಿ ನಿಲಯದಲ್ಲಿ ಜು. 20ರಂದು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ, ಕೊಪ್ಪಳ ಜಿಲ್ಲೆಯ ಭರತ್ ಯತ್ತಿನಮನಿ (22) ಹಾಗೂ ಆ. 2ರಂದು ಗುನ್ನನಾಯಕನಹಳ್ಳಿ ಗ್ರಾಮದ ನಿಷ್ಕಲಾ (21) ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ 2 ಪ್ರಕರಣಗಳ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪಠ್ಯಕ್ರಮ ಅಭಿವೃದ್ಧಿ ಕೋಶದ ಮುಖ್ಯಸ್ಥ ಡಾ| ಸಂಜೀವ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆತ್ಮಹತ್ಯೆಗಳ ಕುರಿತು ಚರ್ಚೆ ನಡೆಸಲಾಗಿತ್ತು.
ಆತ್ಮಹತ್ಯೆ ತಡೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಾಗ, ಫ್ಯಾನ್ಗಳಿಗೆ ಸುರಕ್ಷಾ ಸಾಧನಾ ಅಳವಡಿಕೆ ಮಾಡಬೇಕು ಎಂಬ ಸಲಹೆಗಳು ವೈದ್ಯರಿಂದ ಕೇಳಿಬಂದಿದ್ದವು.
ಮಿಮ್ಸ್ಗೆ ಭೇಟಿ ನೀಡಿದ ವೈದ್ಯರ ತಂಡದ ಜತೆ ಚರ್ಚಿಸುವಾಗ ಕೆಲವು ವೈದ್ಯರು ಫ್ಯಾನ್ನ ಡೌನ್ರೋಡ್ ಕೊಕ್ಕೆಗಳ ಬಳಸುವ ಬದಲು ನೇರವಾಗಿ ಸೀಲಿಂಗ್ ಗೋಡೆಗೆ ಫ್ಯಾನ್ಗಳನ್ನು ಜೋಡಿಸಬೇಕು. ಒಂದು ವೇಳೆ ನೇಣು ಹಾಕಿಕೊಳ್ಳಲು ಮುಂದಾದರೆ ಆ ಇಡೀ ಘಟಕವು ಒತ್ತಡದಲ್ಲಿ ಕುಸಿಯುತ್ತದೆ. ಆ ಮೂಲಕ ನೇಣು ಬಿಗಿದುಕೊಳ್ಳುವ ಪ್ರಯತ್ನ ತಡೆಯಬಹುದು ಎಂಬ ಸಲಹೆಗಳನ್ನೂ ನೀಡಿದ್ದಾರೆಂದು ತಿಳಿದು ಬಂದಿದೆ.
ಆತ್ಮಹತ್ಯೆ ತಡೆಯಲು ಈ ಕ್ರಮ
ಮಿಮ್ಸ್ ಸಹಿತ ರಾಜ್ಯದ ಮೆಡಿಕಲ್ ಕಾಲೇಜುಗಳ ವಸತಿ ನಿಲಯಗಳಲ್ಲಿ ಆತ್ಮಹತ್ಯೆ ತಡೆ ಸಾಧನ ಅಳವಡಿಸಿದರೆ ಹಾಸ್ಟೆಲ್ಗಳಲ್ಲಿ ಸಂಭವಿಸಬಹುದಾದ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ ಎಂದು ರಾಜೀವ್ ಗಾಂ ಧಿ ಆರೋಗ್ಯ ವಿಜ್ಞಾನಗಳ ವಿ.ವಿ. ವೈದ್ಯರ ತಂಡ ಅಭಿಪ್ರಾಯಪಟ್ಟಿದೆ.
ಕಾರ್ಯನಿರ್ವಹಣೆ ಹೇಗೆ?
ಆತ್ಮಹತ್ಯೆ ತಡೆ ಸಾಧನ ಅಳವಡಿಸುವುದರಿಂದ ಸೀಲಿಂಗ್ ಫ್ಯಾನ್ನಲ್ಲಿ ಹೆಚ್ಚು ತೂಕ ಕಂಡು ಬಂದರೆ ಅದನ್ನು ಪತ್ತೆ ಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಹೆಚ್ಚು ತೂಕ ಬಿದ್ದರೆ ಫ್ಯಾನ್ಗೆ ಅಳವಡಿಸಿರುವ ಸಾಧನ ನೇರವಾಗಿ ವ್ಯಕ್ತಿ ನೆಲ ಮುಟ್ಟುವಂತೆ ಜೋತು ಬೀಳುತ್ತದೆ. ಜತೆಗೆ ಸೈರನ್ ಮೊಳಗಿಸುವ ಮೂಲಕ ಹಾಸ್ಟೆಲ್ ಅಧಿ ಕಾರಿಗಳನ್ನು ಎಚ್ಚರಿಸುತ್ತದೆ. ಆಗ ಶೀಘ್ರವೇ ತಡೆಯಲು ಕಾರ್ಯೋನ್ಮುಖವಾಗಲು ನೆರವಾಗುತ್ತದೆ. ಈ ಕಾರ್ಯ ವಿಧಾನವು ಸಾವುನೋವುಗಳನ್ನು ತಡೆಗಟ್ಟಲು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಚರ್ಚೆಗಳು ನಡೆದಿವೆ.
ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ಸಾವು
ಭರತ್ ಯತ್ತಿನಮನಿ ಎಂಬಿಬಿಎಸ್ವ್ಯಾಸಂಗ ಇಷ್ಟವಿಲ್ಲದಿದ್ದರೂ ಪೋಷಕರ ಒತ್ತಡಕ್ಕೆ ಮಣಿದಿದ್ದಿರಿಂದ ಖನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ. ನಿಷ್ಕಲಾ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಳು ಎಂದು ಹೇಳಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪಠ್ಯಕ್ರಮ ಅಭಿವೃದ್ಧಿ ಕೋಶದ ಡಾ| ಸಂಜೀವ್ ನೇತೃತ್ವದ ತಂಡ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಿಮ್ಸ್ಗೆ ಭೇಟಿ ನೀಡಿತ್ತು. ಆತ್ಮಹತ್ಯೆಗೆ ಏನು ಕಾರಣ ಎಂಬುದನ್ನು ತಿಳಿಸಿದ್ದೇವೆ. ವಸತಿ ನಿಲಯದಲ್ಲಿ ಆಯಂಟಿ ಸೂಸೈಡ್ ಡಿವೈಸ್ ಅಳವಡಿಕೆ ಬಗ್ಗೆ ವೈದ್ಯರ ತಂಡ ಚರ್ಚೆ ನಡೆಸಿದೆ. ಅದರ ಬಗ್ಗೆ ವಿವಿಯೇ ನಿರ್ಧಾರ ಕೈಗೊಂಡು ಕ್ರಮ ವಹಿಸಬೇಕಿದೆ.
- ಡಾ| ನರಸಿಂಹಸ್ವಾಮಿ, ನಿರ್ದೇಶಕ, ಮಿಮ್ಸ್, ಮಂಡ್ಯ
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು “ಆಯಂಟಿ ಸೂಸೈಡ್ ಡಿವೈಸ್’ ಅಳವಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ದಾಖಲಾತಿ ಪ್ರಾರಂಭವಾಗುತ್ತಿದ್ದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಿಂದ ಡಿವೈಸ್ಗಳನ್ನು ಕಳಿಸಲಾಗುವುದು ಎಂದು ತಿಳಿಸಿದ್ದಾರೆ.
- ಡಾ| ಹನುಮಂತಪ್ರಸಾದ್, ಪ್ರಾಚಾರ್ಯರು, ಮಿಮ್ಸ್