ಪಾಕ್ ಬೆಂಬಲಿತ ಉಗ್ರರು ನೇಪಾಳದ ಮೂಲಕ ಭಾರತ ಪ್ರವೇಶಿಸುವ ಸಾಧ್ಯತೆ: ನೇಪಾಳ ಅಧ್ಯಕ್ಷರ ಸಲಹೆಗಾರರ ಎಚ್ಚರಿಕೆ!

ಕಾಠ್ಮಂಡು: ಪಾಕಿಸ್ಥಾನ ಮೂಲದ ಜೈಷ್-ಎ- ಮೊಹಮ್ಮದ್, ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆಗಳು ನೇಪಾಲದ ಮೂಲಕ ಭಾರತವನ್ನು ಪ್ರವೇಶಿಸಿ ಉಗ್ರ ಕೃತ್ಯ ನಡೆಸುವ ಅಪಾಯವಿದೆ ಎಂದು ನೇಪಾಲ ಅಧ್ಯಕ್ಷ ಕೆ.ಪಿ.ಓಲಿ ಅವರ ಸಲಹೆಗಾರ ಸುನಿಲ್ ಬಹದ್ದೂರ್ ಥಾಪಾ ಅವರು ಎಚ್ಚರಿಕೆ ನೀಡಿದ್ದಾರೆ.

ನೇಪಾಲ ಅಂತಾರಾಷ್ಟ್ರೀಯ ಸಹಕಾರ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದು, ಪಾಕಿಸ್ಥಾನವು ಪೋಷಿಸುತ್ತಿರುವ ಉಗ್ರರು ಭಾರತವಷ್ಟೇ ಅಲ್ಲದೇ, ಇಡೀ ದಕ್ಷಿಣ ಏಷ್ಯಾ ಭಾಗದ ಶಾಂತಿ ಹಾಗೂ ಸ್ಥಿರತೆಗೆ ಸವಾಲಾಗಿದ್ದಾರೆ. ಪಾಕಿ ಸ್ಥಾನವು ನೇಪಾಲದ ಭೂ-ಸಾರಿಗೆ ಮಾರ್ಗವನ್ನು ಬಳಸಿ ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಥಾಪಾ, ಈ ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಭಾರತದ ಸಹಾಯವನ್ನೂ ಕೋರಿದ್ದಾರೆ.
ಅಲ್ಲದೇ ಉಗ್ರರಿಗೆ ಪಾಕಿಸ್ಥಾನ ನೀಡುತ್ತಿರುವ ಬೆಂಬ ಲವು ಸಾರ್ಕ್ನ ಕಾರ್ಯದಕ್ಷತೆಗೆ ಹಾಗೂ ಪ್ರಾದೇಶಿಕ ಗಡಿಗಳ ಸಮನ್ವಯಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದ ಅವರು, ಉಗ್ರವಾದವನ್ನು ನಿಗ್ರಹಿಸಲು ಯಾವುದೇ ಪ್ರಾದೇಶಿಕ ಆಡಳಿತವೂ ಇಬ್ಬಗೆ ನೀತಿಯನ್ನು ಅನುಸರಿಸಬಾರದು. ಪ್ರಾದೇಶಿಕ ಸಮನ್ವಯತೆ ಮೂಲಕ ಗಡಿಯಾಚೆಗಿನ ಅಕ್ರಮ ಹಣ ವರ್ಗಾವಣೆ ತಡೆ, ಭದ್ರತೆ, ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದ್ದಾರೆ.ಕಾರ್ಯಕ್ರಮದಲ್ಲಿ ಪಹಲ್ಗಾಮ್ ಉಗ್ರ ದಾಳಿ, ಆಪರೇಷನ್ ಸಿಂದೂರ ಬಗ್ಗೆಉಲ್ಲೇಖಿಸಲಾಗಿದೆ.
ನೇಪಾಲ-ಭಾರತದ ಗಡಿಯಲ್ಲಿ
ಕನಿಷ್ಠ ಭದ್ರತೆಯೇ ಲಾಭ?
ಭಾರತ ಹಾಗೂ ನೇಪಾಲದ ನಡುವೆ 1,751 ಕಿ.ಮೀ. ಮುಕ್ತವಾದ ಗಡಿಯಿದ್ದು, ಇಲ್ಲಿ ಭದ್ರತಾ ತಪಾಸಣೆ ಬಹಳ ಕಡಿಮೆ ಮಟ್ಟದಲ್ಲಿದೆ. ಆದ್ದರಿಂದ ಉಗ್ರರು ನೇಪಾಲಿಗರ ದಾಖಲೆಗಳನ್ನು ನಕಲು ಮಾಡಿ ಸುಲಭವಾಗಿ ಭಾರತದ ಗಡಿ ಪ್ರವೇಶಿಸಬಹುದಾಗಿದೆ. ಈ ಹಿಂದೆಯೂ ಹಲವು ಬಾರಿ ನೇಪಾಲ ಗಡಿ ಮೂಲಕ ಪ್ರವೇಶಿಸಲು ಯತ್ನಿಸಿದ್ದ ಉಗ್ರರನ್ನು ಬಂಧಿಸಲಾಗಿದೆ. 1999ರಲ್ಲಿ ನಡೆದ ಕಂದಾಹಾರ ಹೈಜಾಕ್ ವೇಳೆಯೂ ಇದೇ ಮಾದರಿ ಗಡಿ ಉಲ್ಲಂಘನೆ ನಡೆದಿತ್ತು.
