Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆನರಾ ಬ್ಯಾಂಕ್ ಕಳವು: ಕಳ್ಳರು ಬ್ಯಾಂಕ್,ರೈಲ್ವೆ ನೌಕರರೇ ಕಳ್ಳತನ ಮಾಡಿದ್ರಾ?

Spread the love

ವಿಜಯಪುರ:ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್‌ಮನ್‌, ಎಲೆಕ್ಟ್ರೀಷಿಯನ್‌ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಒಟ್ಟು 39 ಕೆ.ಜಿ.ಚಿನ್ನ, ₹1.16 ಕೋಟಿ ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ರೈಲ್ವೆ ಇಲಾಖೆಗೆ ಸೇರಿದ ಗೂಡ್ಸ್‌ ಲಾರಿ, 4 ವಾಕಿಟಾಕಿ, ಒಂದು ಪಿಸ್ತೂಲ್‌ನಂತಿರುವ ಸಿಗರೇಟ್‌ ಲೈಟರ್‌, 2 ಗ್ಯಾಸ್‌ ಸಿಲಿಂಡರ್‌, ಒಂದು ಆಕ್ಸಿಜನ್‌ ಸಿಲಿಂಡರ್‌, ಬರ್ನಿಂಗ್‌ ಗನ್‌, ನಕಲಿ ಕೀಲಿಕೈಗಳು, ವಿವಿಧ ಕಂಪನಿಗಳ ಐದು ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್‌ ಕುಮಾರ್‌ ರಾಠೋಡ್‌ ಮತ್ತು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ನಗರದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಕೆನರಾ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ (41), ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ (38), ಸುನೀಲ ಮೋಕಾ (40) ಎಂಬುವವರನ್ನು ಈಗಾಗಲೇ ಬಂಧಿಸಿ ಅವರಿಂದ ₹ 10.75 ಕೋಟಿ ಮೌಲ್ಯದ 10.5 ಕೆ.ಜಿ.ಬಂಗಾರದ ಆಭರಣ ಮತ್ತು ಕರಗಿಸಿದ ಬಂಗಾರದ ಕಟ್ಟಿಯನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಈ ಮೂವರು ಆರೋಪಿಗಳ ವಿಚಾರಣೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳಾದ ಹುಬ್ಬಳ್ಳಿ ನೈರುತ್ಯ ರೈಲ್ವೆ ನೌಕರರಾದ ಬಾಲರಾಜ ಮಣಿಕಮ್ ಯೆರುಕುಲಾ(40), ಬಾಬುರಾವ್‌ ಮಿರಿಯಾಲ (40), ಸೋಲೋಮನ್ವೇಸ್ಲಿ ಪಲುಕುರಿ (40), ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಪೀಟರ್ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಪೀಟರ್ (40), ಖಾಸಗಿ ನೌಕರ ಗುಂಡು ಜೋಸೆಫ್‌ (28), ಚಂದನರಾಜ್ (29), ಚಾಲಕ ಇಜಾಜ್ ಧಾರವಾಡ(34), ವಾಚಮನ್ ಸುಸೈರಾಜ್ (44), ನಕಲಿ ಕೀಲಿ ಕೈ ತಯಾರಿಸುವ ಅಂಗಡಿಯವ ಮಹಮ್ಮದ್ ಆಸೀಫ್ ಕಲ್ಲೂರ (31),ಚಾಲಕ ಅನೀಲ ಮಿರಿಯಾಲ (40), ಖಾಸಗಿ ಉದ್ಯೋಗಿ ಅಬು ಅಲಿಯಾಸ್‌ ಮೋಹನಕುಮಾರ (42), ಇಲೆಕ್ಟ್ರೀಷಿಯನ್‌ ಮರಿಯಾದಾಸ (40) ಎಂಬುವವರನ್ನು ಬಂಧಿಸಿಲಾಗಿದೆ ಎಂದರು.

ಬಂಧಿತರೆಲ್ಲರೂ ಹುಬ್ಬಳ್ಳಿ ನಗರದವರು ಮತ್ತು ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದರು. ಪ್ರಥಮ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ರಾಜ್ಯ, ದೇಶದ ವಿವಿಧೆಡೆ ಈ ಹಿಂದೆ ನಡೆದಿದ್ದ ದೊಡ್ಡ ದೊಡ್ಡ ಬ್ಯಾಂಕ್‌ ದರೋಡೆ ಪ್ರಕರಣಗಳನ್ನು ಅಧ್ಯಯನ ಮಾಡಿದ್ದರು. ಜೊತೆಗೆ ಸಿನಿಮಾ, ಧಾರಾವಾಹಿಗಳನ್ನು ನೋಡಿ ಬ್ಯಾಂಕ್‌ ಕಳುವಿಗೆ ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿದ್ದರು ಎಂದು ಹೇಳಿದರು.

58 ಕೆ.ಜಿ ಅಲ್ಲ, 40 ಕೆ.ಜಿ.ಚಿನ್ನ

ಬ್ಯಾಂಕಿನ ಕಳುವಾದ ಸಂದರ್ಭದಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ನಲ್ಲಿ 58.97 ಕೆ.ಜಿ. ಚಿನ್ನಾಭರಣ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದರು. ಆದರೆ, ತನಿಖೆಯ ವೇಳೆ ಕಳುವಾಗಿದ್ದ ಬಂಗಾರದ ಪ್ರಮಾಣವನ್ನು ನಿಖರವಾಗಿ ಪರಿಶೀಲಿಸಿದಾಗ ಒಟ್ಟು 40.7 ಕೆ.ಜಿ. ಎಂಬುದು ಖಚಿತವಾಗಿದೆ. ಈ ಕುರಿತು ಬ್ಯಾಂಕಿನ ಅಧಿಕಾರಿಗಳು ಲಿಖಿತ ವರದಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಂಧಿತ ಆರೋಪಿಗಳಿಂದ 39 ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಆರೋಪಿಗಳು ಒಂದಷ್ಟು ಬಂಗಾರ ಮಾರಾಟ ಮಾಡಿ ಬಂದ ಹಣವನ್ನು ಗೋವಾದ ಮೆಜೆಸ್ಟಿಕ್‌ ಪ್ರೈಡ್‌ ಕ್ಯಾಸಿನೋದಲ್ಲಿ ಡಿಪಾಸಿಟ್‌ ಮಾಡಿದ್ದ ₹ 1.16 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂರ್ನಾಲ್ಕು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯ ನಡೆದಿದೆ. ಕಳವುವಾಗಿದ್ದ ಚಿನ್ನಾಭರಣದಲ್ಲಿ ಶೇ 85ರಷ್ಟು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ತನಿಖೆಯಲ್ಲಿ ಪಾಲ್ಗೊಂಡಿದ್ದ 100 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯ ಕಠಿಣ ಪರಿಶ್ರಮ, ಕರ್ತವ್ಯ ನಿರ್ವಹಣೆ, ಬದ್ಧತೆಯನ್ನು ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಮೇ 23 ರಿಂದ 25ರ ನಡುವೆ ಕಳ್ಳರು ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನ ಸೇಫ್ ಲಾಕರ್‌ನಲ್ಲಿದ್ದ ಅಂದಾಜು ₹ 53.26 ಕೋಟಿ ಮೌಲ್ಯದ ಬಂಗಾರದ ಆಭರಣ ಹಾಗೂ ₹ 5,20,450 ನಗದು ಸೇರಿದಂತೆ ಒಟ್ಟು ₹ 53.31 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.


Spread the love
Share:

administrator

Leave a Reply

Your email address will not be published. Required fields are marked *