ಐಐಎಸ್ಸಿ ನಿವೃತ್ತ ವಿಜ್ಞಾನಿಯನ್ನು ಬಿಡಲಿಲ್ಲ ಡಿಜಿಟಲ್ ಅರೆಸ್ಟ್ ಮೋಸದ ಜಾಲ

ಡಿಜಿಟಲ್ ಯುಗ ಶರವೇಗದಲ್ಲಿ ಸಾಗುತ್ತಿದ್ದಂತೆ ಸೈಬರ್ ವಂಚನೆಯ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ‘ಡಿಜಿಟಲ್ ಅರೆಸ್ಟ್’ಗೆ ಸಿಕ್ಕಿಕೊಳ್ಳುವ ಮೂಲಕ ಕೂಡಿಟ್ಟ ಹಣವನ್ನೆಲ್ಲ ಕಳ್ಳರ ಖಾತೆಗೆ ವರ್ಗಾಯಿಸುವುದು ತೀರ ದುಃಖಕರ ಸಂಗತಿ. ಇಂದಿಗೂ ಅನೇಕ ಮಂದಿ ಇಂತಹ ಪ್ರಕರಣಗಳಲ್ಲಿ ಸಿಲುಕಿ, ಕೋಟಿಗಟ್ಟಲೇ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಸದ್ಯ ಇದೇ ರೀತಿಯ ಮೋಸದ ಜಾಲಕ್ಕೆ ಹಿರಿಯ ನಿವೃತ್ತ ಭಾರತೀಯ ವಿಜ್ಞಾನಿ ಡಾ. ಉಷಾ ಗೋಸ್ವಾಮಿ ಕೂಡ ಸಿಲುಕಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಹಗರಣದಲ್ಲಿ ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಉಷಾ ಅವರು ಕಳೆದುಕೊಂಡಿರುವ ಸಂಗತಿ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಉಷಾ ಅವರ ಪುತ್ರಿ ರಿಚಾ ಗೋಸ್ವಾಮಿ, ತಮ್ಮ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿರುವ ಅವರು, ‘ನಾನು ಬರೆದ ಅತ್ಯಂತ ಕಷ್ಟಕರವಾದ ಪೋಸ್ಟ್ ಇದು’ ಎಂದು ಹೇಳಿದ್ದಾರೆ. ಇಂತಹ ಸ್ಥಿತಿ ಯಾರಿಗೆ ಬೇಕಾದರೂ ಬರಬಹುದು ಎಂದು ಇತರರಿಗೆ ಎಚ್ಚರಿಸಿದ್ದಾರೆ.
ಪೋಸ್ಟ್ ಪ್ರಕಾರ, ಈ ಹಗರಣದಲ್ಲಿ ಫಿಶಿಂಗ್ ಲಿಂಕ್ ಅಥವಾ ಇಮೇಲ್ಗಳನ್ನು ಒಳಗೊಂಡಿರಲಿಲ್ಲ. ಡಾ. ಉಷಾ ಗೋಸ್ವಾಮಿ ಅವರ ಆಧಾರ್ ಸಂಖ್ಯೆ, ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳಿಗೆ ಸಂಬಂಧಿಸಿದೆ ಎಂದು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿದ ವಂಚಕರು, ವಿಡಿಯೊ ಕಾಲ್ ಮೂಲಕ ವಂಚನೆಯ ಜಾಲವನ್ನು ಬೀಸಿದ್ದರು.
ವಂಚಕರು ನಕಲಿ ದಾಖಲೆಗಳನ್ನು ಮುಂದಿಟ್ಟು, ವಿಡಿಯೊಗಳನ್ನು ಜಾಣ್ಮೆಯಿಂದ ಕಳುಹಿಸಿದ್ದರು. ಉಷಾ ಅವರನ್ನು ನಿರಂತರ ಬೆದರಿಕೆ ಮತ್ತು ಬಲವಂತಕ್ಕೆ ಒಳಪಡಿಸುವ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡಿದ್ದರು. ಕೆಲವು ದಿನಗಳ ಕಾಲ ಅವರನ್ನೂ ಬೆದರಿಸಿ, ವಂಚನೆಯ ಜಾಲದಲ್ಲಿ ಸಿಲುಕಿಸಿದ ಕಿಡಿಗೇಡಿಗಳು, ಅವರು ವರ್ಷಗಳಿಂದ ಉಳಿಸಿಟ್ಟಿದ್ದ ಹಣವನ್ನು ವರ್ಗಾಯಿಸುವಂತೆ ಮಾನಸಿಕವಾಗಿ ಒತ್ತಡ ಹೇರಿರುವುದು ತಿಳಿದುಬಂದಿದೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಷಾ ಅವರ ಕುಟುಂಬ, ಡಿಜಿಟಲ್ ಅರೆಸ್ಟ್ಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಕೊಟ್ಟಿದೆ. ಮತ್ತು ಕಾನೂನು ಕ್ರಮಕ್ಕೆ ಮುಂದಾಗಿದೆ. ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಮತ್ತು ಗುರಿಯಾಗಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.