ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪೂರೈಕೆ: ಮನಃಶಾಸ್ತ್ರಜ್ಞೆ ಸೇರಿ ಇಬ್ಬರ ಬಂಧನ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಆರೋಪದಡಿಯಲ್ಲಿ ಮನಃಶಾಸ್ತ್ರಜ್ಞೆ ಸೇರಿ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರಾಗೃಹದಲ್ಲಿದ್ದ ಕೈದಿಗಳ ಮನಃಪರಿವರ್ತನೆಗಾಗಿ ಮನಃಶಾಸ್ತ್ರಜ್ಞೆ ನವ್ಯಶ್ರೀ ಭೇಟಿ ನೀಡುತ್ತಿದ್ದರು. ಎರಡು ದಿನಗಳ ಹಿಂದೆ ಜೈಲಿನ ಬ್ಯಾರಕ್ ವೊಂದರ ಒಳಕ್ಕೆ ಹೋಗುತ್ತಿದ್ದಾಗ ಅವರ ಬ್ಯಾಗ್ ಪರಿಶೀಲನೆ ನಡೆಸಲಾಯಿತು. ಆಗ ಅವರ ಬ್ಯಾಗ್ ನಲ್ಲಿ ಮೊಬೈಲ್ ಪತ್ತೆಯಾಯಿತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಪೂರೈಕೆ ಮಾಡುತ್ತಿರುವುದಾಗಿ ಒಪ್ಪಿಕೊಂಡರು ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತನಿಖೆ ಸಂದರ್ಭದಲ್ಲಿ ನವ್ಯಶ್ರೀ ಅವರು ತನಗೆ ಮತ್ತೊಬ್ಬ ವ್ಯಕ್ತಿ ಮೊಬೈಲ್ ತಂದು ಕೊಡುತ್ತಿದ್ದ. ಆ ಮೊಬೈಲ್ ಅನ್ನು ಕೈದಿಗಳಿಗೆ ನೀಡುತ್ತಿದ್ದೆ ಎಂದು ತಿಳಿಸಿದ್ದಾರೆ. ಆಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಜೈಲಿನ ಅಧೀಕ್ಷಕರು ಈ ಸಂಬಂಧ ದೂರು ನೀಡಿದ್ದರು.