ತೋಟದಲ್ಲಿ ನವಜಾತ ಶಿಶು ಶವ ಪತ್ತೆ, ತಾಯಿ ಪರಾರಿ!

ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯಲ್ಲಿ ನವಜಾತ ಶಿಶುವನ್ನು ತೋಟದಲ್ಲಿ ಬಿಸಾಕಿ ತಾಯಿ ಪರಾರಿಯಾಗಿದ್ದಾಳೆ.
ಜನಿಸಿ ಕೆಲವೇ ಗಂಟೆಕಳೆದಿರುವ ನಿರ್ಜೀವ ನವಜಾತ ಹೆಣ್ಣು ಶಿಶು ಕಟ್ಟೆಹಾಡಿ ಸಮುದಾಯ ಭವನದ ಬಳಿಯ ತೋಟದಲ್ಲಿ ಪತ್ತೆಯಾಗಿದ್ದು, ನಾಯಿಗಳು ಎಳೆದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು, ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ.ಚಂದ್ರ ಅವರಿಗೆ ಮಾಹಿತಿ ನೀಡಿದ್ದರು.
ಅವರು ನೀಡಿದ ಮಾಹಿತಿಯಂತೆ ಸ್ಧಳಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ತಾಲ್ಲೂಕು ವೈದ್ಯಾಧಿಕಾರಿ ಇಂದೂಧರ್, ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ , ಗ್ರಾಮಾಂತರ ಠಾಣಾಧಿಕಾರಿ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಶುವಿನ ಶವವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.