ನಕ್ಸಲರ ಬೃಹತ್ ದಾಳಿ: ಓಡಿಶಾದಲ್ಲಿ 4 ಟನ್ ಸ್ಫೋಟಕ ಲಾರಿ ಲೂಟಿ

ಭುವನೇಶ್ವರ: ದೇಶವನ್ನು ನಕ್ಸಲ್ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕಠಿನ ಕ್ರಮಗಳಿಂದಾಗಿ ನಕ್ಸಲರು ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೇ ಒಡಿಶಾದ ಸುಂದರ್ಗಢ ಜಿಲ್ಲೆಯ ಕಲ್ಲು ಕೋರೆಯೊಂದರಲ್ಲಿ ಇರಿಸಿದ್ದ 4 ಟನ್ ಸ್ಫೋಟಕ ವಸ್ತುಗಳಿದ್ದ ಟ್ರಕ್ಕನ್ನೇ ನಕ್ಸಲರು ಲೂಟಿ ಮಾಡಿದ್ದಾರೆ!
ಈ ಸ್ಫೋಟಕಗಳನ್ನು ಬಳಸಿಕೊಂಡು ನಕ್ಸಲರು ಭದ್ರತ ಪಡೆಗಳ ಮೇಲೆ ಅಥವಾ ನಾಗರಿಕರ ಮೇಲೆ ದಾಳಿ ನಡೆಸಬಹುದೇ ಎಂಬ ಭೀತಿ ಹುಟ್ಟಿದೆ.
ಮಂಗಳ ವಾರ ಸಂಜೆ ಕಲ್ಲು ಕೋರೆಯೊಳಗೆ ನುಗ್ಗಿದ್ದ ಶಸ್ತ್ರಸಜ್ಜಿತರಾದ 25-30 ನಕ್ಸಲರು ಸ್ಫೋಟಕ ವಸ್ತುಗಳಿದ್ದ ಟ್ರಕ್ ಕದ್ದೊಯ್ದಿದ್ದಾರೆ. ಬಳಿಕ ಝಾರ್ಖಂಡ್ ಗಡಿಯಲ್ಲಿ ಈ ವಸ್ತು ಗಳನ್ನು ಇಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಮೇಲಿಂದ ಮೇಲೆ ಸೋಲನ್ನು ಅನುಭವಿಸಿರುವ ನಕ್ಸಲ್ ಪಡೆಗೆ ನಾಯಕ ಬಸವರಾಜು ಹತ್ಯೆ ದೊಡ್ಡ ಆಘಾತ ನೀಡಿತ್ತು. ಅದರ ಸೇಡು ತೀರಿಸಿಕೊಳ್ಳಲು ನಕ್ಸಲರು ಹೊಂಚುಹಾಕುತ್ತಿದ್ದು, ಅದರ ಭಾಗವಾಗಿ ಈ ಕಳವು ಮಾಡಿರಬಹುದೆಂಬ ಶಂಕೆಯನ್ನು ಭದ್ರತ ಪಡೆಗಳು ವ್ಯಕ್ತಪಡಿಸಿವೆ. ಝಾರ್ಖಂಡ್ನ ನಕ್ಸಲರು ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.
ಗಡಿಯಲ್ಲಿ ಕಟ್ಟೆಚ್ಚರ: ಝಾರ್ಖಂಡ್ನತ್ತ ಸ್ಫೋಟಕ ವಸ್ತುಗಳನ್ನು ನಕ್ಸಲರು ಸಾಗಿಸಿರುವ ವರದಿಯ ಬೆನ್ನಲ್ಲೇ ಒಡಿಶಾ-ಝಾರ್ಖಂಡ್ನ ನಕ್ಸಲ್ ಚಟುವಟಿಕೆಯಿರುವ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತ ಸಿಬ್ಬಂದಿಯನ್ನು ನಿಯೋ
ಜಿಸಲಾಗಿದ್ದು, ಗಸ್ತು ಕೂಡ ಹೆಚ್ಚಿಸಲಾಗಿದೆ.