ಸನ್ಮಾನದಿಂದ ಹೊರಬಿದ್ದ ಮನೀಶ್ ಪಾಂಡೆ: ಮಹಿಳಾ ಕ್ರಿಕೆಟರ್ ಭಾರ್ತಿ ಫುಲ್ಮಾಲಿ ವಾಗ್ದಾಳಿ

ಐಪಿಎಲ್ 2025 ರ ಮಧ್ಯೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಭಾರ್ತಿ ಫುಲ್ಮಾಲಿ, ಕನ್ನಡಿಗನ ಪರ ಧ್ವನಿ ಎತ್ತಿ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರ್ತಿ ಫುಲ್ಮಾಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಬಿಸಿಸಿಐ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವಾಸ್ತವವಾಗಿ, ಇದು ಐಪಿಎಲ್ನ 18 ನೇ ಸೀಸನ್ ಆಗಿದ್ದು, ಐಪಿಎಲ್ನಲ್ಲಿ 18 ವರ್ಷಗಳನ್ನು ಪೂರೈಸಿದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಸನ್ಮಾನಿಸಿತು. ವಾಸ್ತವವಾಗಿ, ಈ ಆಟಗಾರರು ಮೊದಲ ಸೀಸನ್ನಿಂದಲೂ ಈ ಲೀಗ್ನ ಭಾಗವಾಗಿದ್ದಾರೆ. ಈ ಮೂವರು ಮಾತ್ರವಲ್ಲದೆ ಕೆಕೆಆರ್ ಪರ ಆಡುತ್ತಿರುವ ಕನ್ನಡಿಗ ಮನೀಶ್ ಪಾಂಡೆ ಕೂಡ ಐಪಿಎಲ್ನ ಎಲ್ಲಾ ಸೀಸನ್ಗಳಲ್ಲಿ ಆಡಿದ್ದಾರೆ. ಆದರೆ ಬಿಸಿಸಿಐ ಅವರಿಗೆ ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಿಲ್ಲ, ಅದಕ್ಕಾಗಿಯೇ ಈ ಮಹಿಳಾ ಕ್ರಿಕೆಟರ್ ಬಿಸಿಸಿಐ ತಾರತಮ್ಯವನ್ನು ಖಂಡಿಸಿದ್ದಾರೆ.
ಬಿಸಿಸಿಐ ವಿರುದ್ಧ ಭಾರ್ತಿ ಫುಲ್ಮಾಲಿ ಆರೋಪ
ಭಾರತೀಯ ಮಹಿಳಾ ಕ್ರಿಕೆಟರ್ ಭಾರ್ತಿ ಫುಲ್ಮಾಲಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಬಿಸಿಸಿಐ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿದೆ. ಐಪಿಎಲ್ನ ಮೊದಲ ಸೀಸನ್ನಿಂದ ಲೀಗ್ನ ಭಾಗವಾಗಿರುವ ಅನುಭವಿ ಕ್ರಿಕೆಟಿಗ ಮನೀಶ್ ಪಾಂಡೆ ವಿರುದ್ಧದ ಅನ್ಯಾಯದ ವಿಷಯವನ್ನು ಭಾರ್ತಿ ತಮ್ಮ ಪೋಸ್ಟ್ನಲ್ಲಿ ಎತ್ತಿದ್ದಾರೆ. ಭಾರ್ತಿ ಫುಲ್ಮಾಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದು, ‘ಮನೀಶ್ ಪಾಂಡೆ 18 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ. ಆದರೆ ಅವರಿಗೆ ಪಿಆರ್ (ಸಾರ್ವಜನಿಕ ಸಂಪರ್ಕ) ಮತ್ತು ದೊಡ್ಡ ಅಭಿಮಾನಿ ಬಳಗ ಇಲ್ಲದ ಕಾರಣ ಬಿಸಿಸಿಐ ಅವರಿಗೆ ಯಾವುದೇ ಗೌರವ ನೀಡಲಿಲ್ಲ. ಆದರೆ ದೇವರು ಅವನಿಗೆ ಇನ್ನೊಂದು ಅವಕಾಶ ನೀಡಿದ್ದರೆ, ಅವನು ತನ್ನನ್ನು ತಾನು ಸಾಬೀತುಪಡಿಸುತ್ತಿದ್ದ.
ಇನ್ನು ಮನೀಶ್ ಪಾಂಡೆ ಆಟವನ್ನು ಹೊಗಳಿರುವ ಭಾರ್ತಿ ಫುಲ್ಮಾಲಿ, ಮನೀಶ್ 18 ನೇ ಸೀಸನ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿ 3 ಇನ್ನಿಂಗ್ಸ್ಗಳಲ್ಲಿ 92 ರನ್ ಗಳಿಸಿದರು. ಇದರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 19 ರನ್ಗಳು (14 ಎಸೆತಗಳು), ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 36 ರನ್ಗಳು (28 ಎಸೆತಗಳು) ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 37 ರನ್ಗಳು (23 ಎಸೆತಗಳು) ಸೇರಿವೆ. ಈ ಅವಧಿಯಲ್ಲಿ, ಅವರ ಸ್ಟ್ರೈಕ್ ರೇಟ್ 141.54 ಮತ್ತು ಸರಾಸರಿ 46 ಆಗಿತ್ತು, ಇದು ಅವರ ಅನುಭವ ಮತ್ತು ಪ್ರತಿಭೆಯನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
2008 ರಿಂದ ಐಪಿಎಲ್ನಲ್ಲಿ ಭಾಗಿ
ಮನೀಶ್ ಪಾಂಡೆ 2008 ರಿಂದ ಐಪಿಎಲ್ನ ಭಾಗವಾಗಿದ್ದು, ಅನೇಕ ಸ್ಮರಣೀಯ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ವಿಶೇಷವಾಗಿ 2009 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ, ಅವರು ತಮ್ಮ ಮೊದಲ ಐಪಿಎಲ್ ಶತಕವನ್ನು ಬಾರಿಸಿದ್ದರು. ಅದು ಆ ಸಮಯದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿತ್ತು. ಅಲ್ಲದೆ ಐಪಿಎಲ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರ್ತಿ ಅವರ ಈ ಪೋಸ್ಟ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಬಿಸಿಸಿಐ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.