ಪಾಕಿಸ್ತಾನಕ್ಕೆ ಸೇನೆಯ ಗುಪ್ತಮಾಹಿತಿ ಸೋರಿಕೆ: ಗುಜರಾತ್ನಲ್ಲಿ ಗುತ್ತಿಗೆ ವೈದ್ಯ ಬಂಧನ, ಗೂಢಚಾರಿಕೆ ಪ್ರಕರಣ ಬೆಳಕಿಗೆ

ಪಾಕಿಸ್ತಾನಕ್ಕೆ ಗೂಢಚರ್ಯೆ ಮಾಡುವುದರ ವಿರುದ್ಧ ದೊಡ್ಡ ಕ್ರಮವಾಗಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಭಾರತೀಯ ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (BSF) ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಚ್ ಜಿಲ್ಲೆಯ 28 ವರ್ಷದ ವ್ಯಕ್ತಿಯನ್ನು ಬಂಧಿಸಿದೆ. ಸಹದೇವ್ಸಿಂಗ್ ಗೋಹಿಲ್ ಎಂಬ ವ್ಯಕ್ತಿ ಕಚ್ನ ಮಾತನಾ ಮಾಧ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಗೋಹಿಲ್ 2023ರ ಮಧ್ಯಭಾಗದಿಂದ ಆದಿತಿ ಭಾರದ್ವಾಜ್ ಎಂಬ ಪಾಕಿಸ್ತಾನಿ ಮಹಿಳಾ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ ಎಂದು ATS ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಕಾಪಡೆ ಮತ್ತು BSF ಶಿಬಿರಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಾಗೂ ಹತ್ತಿರದ ನಿರ್ಮಾಣ ಕೆಲಸಗಳ ಬಗ್ಗೆ ಸಹದೇವ್ಸಿಂಗ್ ಆಕೆಗೆ ಕಳುಹಿಸಿದ್ದಾನೆ. ಈ ಚಿತ್ರಗಳನ್ನು ಕಳುಹಿಸಲು WhatsApp ಬಳಸಿದ್ದಾನೆ ಮತ್ತು ಪಾಕಿಸ್ತಾನಿ ಹ್ಯಾಂಡ್ಲರ್ನಿಂದ ಸುಮಾರು ₹40,000 ಪಡೆದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.
2025ರ ಏಪ್ರಿಲ್ 29 ರಂದು ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸಿತು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಲಾಯಿತು ಮತ್ತು ಮೇ 1 ರಂದು ಅಹಮದಾಬಾದ್ನಲ್ಲಿರುವ ATS ಪ್ರಧಾನ ಕಚೇರಿಯಲ್ಲಿ ಗೋಹಿಲ್ನನ್ನು ವಿಚಾರಣೆ ನಡೆಸಲಾಯಿತು. ವಿಚಾರಣೆಯ ಸಮಯದಲ್ಲಿ, ಸೂಕ್ಷ್ಮ ವಿಷಯವನ್ನು ಏಜೆಂಟ್ಗೆ ಕಳುಹಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಬುದ್ಧಿವಂತಿಕೆ ಉಪಯೋಗಿಸಿ ಗೋಹಿಲ್ 2025ರ ಜನವರಿಯಲ್ಲಿ ತನ್ನ ಆಧಾರ್ ಐಡಿಯನ್ನು ಬಳಸಿಕೊಂಡು ಹೊಸ ಸಿಮ್ ಕಾರ್ಡ್ ತೆಗೆದುಕೊಂಡಿದ್ದಾನೆ ಮತ್ತು ನಂತರ ಫೆಬ್ರವರಿಯಲ್ಲಿ WhatsApp OTPಯನ್ನು ಏಜೆಂಟ್ಗೆ ನೀಡಿದ್ದಾನೆ. ಇದು ಆಕೆಗೆ ಭಾರತದಲ್ಲಿ ರಿಮೋಟ್ ಆಗಿ WhatsApp ಖಾತೆಯನ್ನು ನಿರ್ವಹಿಸಲು ಮತ್ತು ವಿಷಯವನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿತು. ಬಂಧಿತ ಗೋಹಿಲ್ ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL) ಗೆ ಕಳುಹಿಸಲಾಯ್ತು. ಅಲ್ಲಿ ತಜ್ಞರು ಪಾಕಿಸ್ತಾನಿ ಏಜೆಂಟ್ ಜೊತೆ ಸಂಪರ್ಕ ಇಟ್ಟುಕೊಂಡ ಬಗ್ಗೆ ಮತ್ತು ಡೇಟಾ ವಿನಿಮಯದ ದಾಖಲೆಗಳ ಪುರಾವೆಗಳನ್ನು ನೀಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ಗೂಢಚರ್ಯೆ ಮತ್ತು ಗೌಪ್ಯ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ATS ಈಗ ಗೋಹಿಲ್ ಮತ್ತು ಅವನ ಪಾಕಿಸ್ತಾನಿ ಸಂಪರ್ಕದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಇತರ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸುತ್ತಿದೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯ ನಂತರ ದೇಶಾದ್ಯಾಂತ ಗೂಢಚಾರಿಕೆ ವಿರುದ್ಧದ ಬಲವಾದ ಕ್ರಮ ತೆಗೆದುಕೊಳ್ಳಲಾಗಿದೆ. ಈವರೆಗೆ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಸೇರಿ 11 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ವಿದ್ಯಾರ್ಥಿಗಳು, ಯೂಟ್ಯೂಬರ್, ಸೇನೆ ಸಿಬ್ಬಂದಿ, ನಾಗರಿಕರು ಮತ್ತು ತಂತ್ರಜ್ಞಾನ ಕ್ಷೇತ್ರದ ಜನ ಇದ್ದಾರೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಎಂಬಾಕೆಯನ್ನಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದು ಕೇವಲ ವ್ಯಕ್ತಿಗತ ಅಪರಾಧವಲ್ಲ, ದೇಶದ ಭದ್ರತೆ ಮತ್ತು ಸಂಪೂರ್ಣತೆಗೆ ತಡೆ ನೀಡುವ ಕೃತ್ಯ ಎಂದ ದೆಹಲಿ ಹೈಕೋರ್ಟ್, ಪಾಕಿಸ್ತಾನಕ್ಕೆ ಸೇನೆಯ ಮಾಹಿತಿ ನೀಡಿದ ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.