Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಜಾತಿ ಭಯೋತ್ಪಾದಕ’ ಎಂಬ ಟೀಕೆ: ದಲಿತ ರ‍್ಯಾಪರ್ ವೇಡನ್ ವಿರುದ್ಧ ಬಲಪಂಥೀಯರ ವಾಗ್ದಾಳಿ

Spread the love

ತಿರುವನಂತಪುರಂ : ಕೇರಳದ ಜನಪ್ರಿಯ ದಲಿತ ರ‍್ಯಾಪರ್, ‘ವೇಡನ್’ ಎಂದೇ ಖ್ಯಾತರಾದ ಹಿರಂದಾಸ್ ಮುರಳಿ ಬಲಪಂಥೀಯ ನಾಯಕರ ಟೀಕೆಗೆ ಗುರಿಯಾದರು. ಆರೆಸ್ಸೆಸ್ ಮುಖವಾಣಿ ‘ಕೇಸರಿ’ಯ ಸಂಪಾದಕ ಎನ್.ಆರ್. ಮಧು ಮತ್ತು ಹಿಂದೂ ಐಕ್ಯ ವೇದಿಯ ಕೆ.ಪಿ. ಶಶಿಕಲಾ ವೇಡನ್ ವಿರುದ್ಧ ಕಟುವಾದ ಹೇಳಿಕೆಗಳನ್ನು ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಆರೆಸ್ಸೆಸ್ ಮುಖವಾಣಿ ‘ಕೇಸರಿ’ಯ ಸಂಪಾದಕ ಎನ್.ಆರ್. ಮಧು, ವೇಡನ್ ಅವರನ್ನು ‘ಜಾತಿ ಭಯೋತ್ಪಾದಕ’ ಎಂದು ಜರಿದಿದ್ದಾರೆ. ದಲಿತ ಸಮುದಾಯದ ವೇಡನ್ , ತಮ್ಮ ಸಂಗೀತದ ಮೂಲಕ ಕಲೆಗೆ ಅಪಹಾಸ್ಯ ಮಾಡುತ್ತಿದ್ದಾರೆ ಮತ್ತು ಸಮಾಜದಲ್ಲಿ ಜಾತಿ ವಿಷವನ್ನು ಬಿತ್ತುತ್ತಿದ್ದಾರೆ ಎಂದು ಮಧು ಆರೋಪಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಕುಂದರ ಬಳಿಯ ದೇವಾಲಯವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಆರ್. ಮಧು, “ವೇಡನ್ ಅವರಂತಹ ಕಲಾವಿದರು ಯುವ ಪೀಳಿಗೆಯ ಮನಸ್ಸಿನಲ್ಲಿ ವಿಷವನ್ನು ತುಂಬುವ ಕಾರ್ಯ ಮಾಡುತ್ತಿದ್ದಾರೆ. ವೇಡನ್ ಗೆ ಬೆಂಬಲ ನೀಡುವವರು ದೇಶವನ್ನು ವಿಭಜಿಸಲು ಬಯಸುವ ವಿಚ್ಛಿದ್ರಕಾರಿ ಶಕ್ತಿಗಳು” ಎಂದು ದೂರಿದ್ದಾರೆ. ದೇವಾಲಯದ ಆಡಳಿತ ಮಂಡಳಿಗಳು ವೇಡನ್ ಅವರಂತಹವರನ್ನು ಲಯ ಮತ್ತು ಕಾವ್ಯ ಪ್ರದರ್ಶನಗಳಿಗೆ ಕರೆಯುವುದನ್ನು ಕಟುವಾಗಿ ಟೀಕಿಸಿದ ಅವರು, “ಇದಕ್ಕೆ ಬದಲಾಗಿ ಅವರು ಕ್ಯಾಬರೆ ಪ್ರದರ್ಶನಗಳನ್ನು ನಡೆಸಬಹುದು,” ಎಂದು ವ್ಯಂಗ್ಯವಾಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಗಳಿಗಾಗಿ, ಸಿಪಿಐ(ಎಂ) ಸ್ಥಳೀಯ ಕಾರ್ಯದರ್ಶಿ ವೇಲಾಯುಧನ್ ನೀಡಿದ ದೂರಿನ ಆಧಾರದ ಮೇಲೆ ಕೊಲ್ಲಂನ ಕಿಳಕ್ಕೆಕಲ್ಲಡ ಪೊಲೀಸರು ಎನ್.ಆರ್. ಮಧು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196ರ ಅಡಿಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೃತ್ಯಗಳನ್ನು ಮಾಡುವುದರ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಮಧು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹಿಂದೂ ಐಕ್ಯ ವೇದಿಯ ಮುಖ್ಯ ಪೋಷಕಿ ಕೆ.ಪಿ. ಶಶಿಕಲಾ ಕೂಡ ವೇಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಾಲಕ್ಕಾಡ್‌ನಲ್ಲಿ ನಡೆದ ಹಿಂದೂ ಐಕ್ಯ ವೇದಿಯ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಡನ್ ಅವರ ರ‍್ಯಾಪ್‌ ಸಂಗೀತಕ್ಕೂ ಎಸ್ಸಿ/ಎಸ್ಟಿ ಸಂಸ್ಕೃತಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

“ರ‍್ಯಾಪ್‌ ಸಂಗೀತ ಎಸ್ಸಿ- ಎಸ್ಟಿ ಸಮುದಾಯದ ವಿಶಿಷ್ಟ ಕಲೆ ಅಥವಾ ಸಂಸ್ಕೃತಿಯ ಭಾಗವೇ? ಅದು ಬುಡಕಟ್ಟು ಸಂಸ್ಕೃತಿಯೇ? ಎಸ್ಸಿ-ಎಸ್ಟಿ ಗುರುತನ್ನು ಆ ಮೂಲಕವೇ ಪ್ರತಿಪಾದಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ.

ವೇಡನ್ ಅವರನ್ನು ‘ಕಾಂಜಾವಳಿ’ ಅಂದ್ರೆ ಗಾಂಜಾ ಸೇದುವವನು ಎಂಬರ್ಥದಲ್ಲಿ ಅವಹೇಳನಕಾರಿ ಮಲಯಾಳಂ ಪದ ಬಳಸಿ ನಿಂದಿಸಿದ ಶಶಿಕಲಾ, “ವೇಡನ್ ಅವರ ಅಸಭ್ಯ ವೇಷಭೂಷಣಗಳಿಂದ ಸಮಾಜವು ಅವಮಾನಕ್ಕೊಳಗಾಗುತ್ತಿದೆ. ಅಂತಹ ಅಸಭ್ಯ ವರ್ತನೆಯನ್ನು ಸಂಭ್ರಮಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ. ಎಸ್ಸಿ-ಎಸ್ಟಿ ಸಮುದಾಯಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಚರ್ಚಿಸಬೇಕು ಮತ್ತು ಪರಿಹರಿಸಬೇಕು,” ಎಂದು ಹೇಳಿದ್ದಾರೆ. ವೇಡನ್ ರಂತಹ ಕಲಾವಿದರ ಹಿಂದೆ ಸರಕಾರ ಅಡಗಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಹಿಂದೂ ಸಮುದಾಯವು ಅಂತಹ ಅಸಭ್ಯ ವರ್ತನೆಯನ್ನು ಎದುರಿಸಲಿದೆ ಎಂದು ಹೇಳಿದರು.

ವೇಡನ್ ಪ್ರತಿಕ್ರಿಯೆ :

ಬಲಪಂಥೀಯ ನಾಯಕರು ತನ್ನ ವಿರುದ್ಧ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವೇಡನ್, ನನ್ನ ವಿರುದ್ಧದ ಹೇಳಿಕೆಗಳು ನನ್ನನ್ನು ತೀವ್ರವಾದಿ, ಪ್ರತ್ಯೇಕತಾವಾದಿ ಅಥವಾ ತೊಂದರೆ ಕೊಡುವವನು ಎಂದು ಬಿಂಬಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದರು.

‘ಕೇಸರಿ’ ಸಂಪಾದಕರ ಹೇಳಿಕೆಗಳನ್ನು “ಅದು ಹಾಸ್ಯವಲ್ಲವೇ?” ಎಂದು ತಳ್ಳಿಹಾಕಿದ ವೇಡನ್, “ನಾನು ಅಂಬೇಡ್ಕರ್ ಅವರ ರಾಜಕೀಯದಲ್ಲಿ ನಂಬಿಕೆ ಇಟ್ಟವನು. ಅದು ಎಲ್ಲಾ ಜೀವಿಗಳಿಗೆ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಇಂತಹ ಟೀಕೆಗಳನ್ನು ನಾನು ಹಿಂದೆಯೂ ಕೇಳಿದ್ದೇನೆ, ಇದು ಹೊಸದೇನಲ್ಲ. ನಾನು ಯಾವುದೋ ಪ್ರತ್ಯೇಕತಾವಾದಿ ಎಂದು ಕೆಲವು ಜನರು ಬಹಳ ಹಿಂದಿನಿಂದಲೂ ಹೇಳುತ್ತಿದ್ದಾರೆ,” ಎಂದಿದ್ದಾರೆ.

ಕೆ.ಪಿ. ಶಶಿಕಲಾ ಹೇಳಿಕೆಗೆ ತಿರುಗೇಟು ನೀಡಿದ ವೇಡನ್, ಸಂಘಪರಿವಾರಕ್ಕೂ ಪ್ರಜಾಪ್ರಭುತ್ವಕ್ಕೂ ಯಾವುದೇ ಸಂಬಂಧವಿಲ್ಲ. ನಾನು ರ‍್ಯಾಪ್ ಮಾಡಬಾರದು ಎಂಬುದು ಶಶಿಕಲಾ ಅವರ ಆದೇಶವಾಗಿದೆ. ನಾನು ಮುಂದಿಡುತ್ತಿರುವ ರಾಜಕೀಯಕ್ಕೆ ಅವರು ಹೆದರುತ್ತಿರುವುದೇ ಇದಕ್ಕೆ ಕಾರಣ. ರ‍್ಯಾಪ್ ಏಕೆ ಎಂಬ ಪ್ರಶ್ನೆಯೇ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ನನಗೆ ಶಾಸ್ತ್ರೀಯ ಸಂಗೀತ ಹಾಡಲು ಬರುವುದಿಲ್ಲ, ಆದ್ದರಿಂದ ರ‍್ಯಾಪ್‌ ಹಾಡುತ್ತಿದ್ದೇನೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವೇಡನ್ ಮೇಲೆ ಬಲಪಂಥೀಯ ನಾಯಕರ ದಾಳಿ ಹಿಂದೆ ಹಲವು ಕಾರಣ !

ಕಡಿಮೆ ಅವಧಿಯಲ್ಲಿ ವೇಡನ್ ರ ಅಪಾರ ಜನಪ್ರಿಯತೆ ವೇಡನ್ ಮೇಲೆ ಬಲಪಂಥೀಯ ನಾಯಕರ ದಾಳಿಗೆ ಇದರ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ವೇಡನ್ ಯುವಜನರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ದಲಿತ ಸಮುದಾಯದಿಂದ ಬಂದ ಓರ್ವ ಕಲಾವಿದ, ಮುಖ್ಯವಾಹಿನಿಯಲ್ಲಿ ಇಷ್ಟೊಂದು ಯಶಸ್ಸು ಸಾಧಿಸಿರುವುದು ಬಲಪಂಥೀಯ ಸಿದ್ಧಾಂತಕ್ಕೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರಿಗೆ ಇಷ್ಟೊಂದು ಜನಪ್ರಿಯತೆಯನ್ನು ಬಲಪಂಥೀಯರು ನಿರೀಕ್ಷಿಸಿರಲಿಲ್ಲ ಮತ್ತು ಇದು ಅವರಿಗೆ ಒಂದು ರೀತಿಯ ಆಘಾತವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

ವೇಡನ್ ಅವರ ರಾಜಕೀಯ ಶೈಲಿಯೂ ಬಲಪಂಥೀಯರಿಗೆ ಡೇಂಜರ್ ಆಗಿ ಕಾಣಿಸಿದೆ. ವೇಡನ್ ರ ಸಂಗೀತ ಕೇವಲ ಮನರಂಜನೆಯಲ್ಲ. ಅದು ತಳ ಸಮುದಾಯಗಳ ನೋವು, ಅಸಮಾನತೆ, ಮತ್ತು ಜಾತಿ ವ್ಯವಸ್ಥೆಯ ವಿರುದ್ಧದ ಪ್ರಬಲ ರಾಜಕೀಯ ಹೇಳಿಕೆಯಾಗಿದೆ ಎಂದು ವಿಮರ್ಶಿಸಲಾಗಿದೆ.

ಅಂಬೇಡ್ಕರ್ ವಾದವನ್ನು ವೇಡನ್ ತಮ್ಮ ರ‍್ಯಾಪ್‌ ಮೂಲಕ ಮುಂದಿಡುತ್ತಾರೆ. ರ‍್ಯಾಪ್‌ ಸಂಗೀತದ ನೇರ, ದಿಟ್ಟ ಮತ್ತು ಕೆಲವೊಮ್ಮೆ ಆಕ್ರಮಣಕಾರಿ ಶೈಲಿಯು, ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಆರೋಪ ಎದುರಿಸುತ್ತಿರುವ ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳಿಗೆ ಅಪಾಯಕಾರಿಯಾಗಿ ಕಾಣಿಸುತ್ತಿದೆ. ಜಾತಿ ರೇಖೆಗಳನ್ನು ಅಳಿಸಬೇಕು ಎಂದು ಆರೆಸ್ಸೆಸ್ ಮುಖಂಡರು ಬಾಯಿಮಾತಿನಲ್ಲಿ ಹೇಳಿದರೂ, ದಲಿತರೊಬ್ಬರು ಹೀಗೆ ನೇರವಾಗಿ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬ ವಿಶ್ಲೇಷಣೆಯಿದೆ.

ದಲಿತರನ್ನು ನಿಯಂತ್ರಿಸುವ ಪ್ರಯತ್ನವೂ ಇದರಲ್ಲಿ ಅಡಗಿದೆ ಎಂದು ಜನರು ಚರ್ಚಿಸುತ್ತಿದ್ದಾರೆ. ಈ ದಾಳಿಗಳು ದಲಿತರು ತಮ್ಮ ಸ್ಥಾನದಲ್ಲಿರಬೇಕು, ಮುಖ್ಯವಾಹಿನಿಗೆ ಬರಬಾರದು ಎಂಬ ಪರೋಕ್ಷ ಸಂದೇಶವನ್ನು ರವಾನಿಸುವ ಪ್ರಯತ್ನವೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ದಲಿತರು ಯುಪಿಎಸ್ಸಿ ಯಂತಹ ಪ್ರಮುಖ ಪರೀಕ್ಷೆ ಬರೆಯಬಾರದು, ಮುಖ್ಯವಾಹಿನಿಯ ಉದ್ಯೋಗಗಳಿಗೆ ಬರಬಾರದು ಎಂದು ಹೇಳುವ ಮನಸ್ಥಿತಿಯ ಮುಂದುವರಿದ ಭಾಗವೇ ಇದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಈ ಹಿಂದೆ ವೇಡನ್ ಅನ್ನು ಗಾಂಜಾ ಪ್ರಕರಣ ಮತ್ತು ಹುಲಿ ಉಗುರಿನ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಸಣ್ಣ ಪ್ರಮಾಣದ ಗಾಂಜಾ ಮತ್ತು ಶಂಕಿತ ಹುಲಿ ಉಗುರಿನ ಆಧಾರದ ಮೇಲೆ, ಒಂದೇ ದಿನ ಎರಡು ಬಾರಿ ಬಂಧಿಸಿದ್ದು, ಅವರನ್ನು ಗುರಿ ಮಾಡುವ ಉದ್ದೇಶ ಸ್ಪಷ್ಟ. ಆದರೆ ಆ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಸಿಕ್ಕಿತು ಮತ್ತು ಸಾರ್ವಜನಿಕವಾಗಿ ಅವರಿಗೆ ಅನುಕಂಪವೂ ವ್ಯಕ್ತವಾಯಿತು. ಆ ಪ್ರಯತ್ನಗಳು ವಿಫಲವಾದಾಗ, ಈಗ ಅವರನ್ನು ‘ಜಾತಿ ಭಯೋತ್ಪಾದಕ’, ‘ಕಾಂಜಾವಳಿ’ ಎಂದು ನಿಂದಿಸುವ ಮೂಲಕ ಅವರ ಚಾರಿತ್ರ್ಯ ಹರಣ ಮಾಡುವ ಮತ್ತು ಸಮಾಜದಲ್ಲಿ ಅವರನ್ನು ಖಳನಾಯಕನನ್ನಾಗಿ ಬಿಂಬಿಸುವ ತಂತ್ರವನ್ನು ಬಲಪಂಥೀಯರು ಅನುಸರಿಸುತ್ತಿದ್ದಾರೆ ಎಂದು ಕೇರಳದಲ್ಲಿ ಹಲವರು ವಾದಿಸುತ್ತಾರೆ.

ದಲಿತ ದ್ವನಿಯನ್ನು ಹತ್ತಿಕ್ಕುವ ಸ್ಪಷ್ಟ ಯತ್ನ ಇದು. ವೇಡನ್ ತಮ್ಮ ರಾಜಕೀಯದ ಬಗ್ಗೆ ನಿರ್ಭೀತರಾಗಿರುವ ದಲಿತ ರ‍್ಯಾಪರ್. ಅವರ ದ್ವನಿ ಬಲಪಂಥೀಯರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದರಿಂದ, ಅವರನ್ನು ವೈಯಕ್ತಿಕವಾಗಿ ಟೀಕಿಸುವ ಮೂಲಕ, ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ, ಅವರ ದ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ಇದಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ವೇಡನ್ ಬೆಂಬಲಕ್ಕೆ ನಿಂತ ಸಿಪಿಐ(ಎಂ)

ಈ ವಿವಾದದಲ್ಲಿ ಸಿಪಿಐ(ಎಂ) ವೇಡನ್ ಬೆಂಬಲಕ್ಕೆ ನಿಂತಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು, ಆರೆಸ್ಸೆಸ್ನ ‘ಆಹಾರ ಶುದ್ಧತೆ’ಯ ಪರಿಕಲ್ಪನೆಯು ಹಿಂದೂ ಬಹುಸಂಖ್ಯಾತವಾದ ಮತ್ತು ಜಾತಿ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಟೀಕಿಸಿದ್ದಾರೆ.

ಸಿಪಿಐ(ಎಂ) ಹಿರಿಯ ನಾಯಕ ಪಿ. ಜಯರಾಜನ್ ಅವರು, ವೇಡನ್ ಅವರ ಸಂಗೀತದಿಂದಾಗಿ ‘ಜಾತಿ ನಿಂದನೆ’ ಎದುರಿಸುತ್ತಿದ್ದಾರೆ. ಕೆ.ಪಿ. ಶಶಿಕಲಾ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು. ಕೋಮುವಾದಿ ವಿಷಸರ್ಪಗಳ ಬಾಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ವೇಡನ್ ಅವರ ಮೇಲಿನ ದಾಳಿಯು ಕೇವಲ ಓರ್ವ ಕಲಾವಿದನ ಮೇಲಿನ ದಾಳಿಯಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಮತ್ತು ದಲಿತರ ದ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳ ಮೇಲಿನ ದಾಳಿಯಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *