ಎನ್ಇಪಿ ಜಾರಿಗೆ ಒತ್ತಡ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಚೆನ್ನೈ :ಕೇಂದ್ರ ಸರಕಾರದ ಪ್ರಾಯೋಜಕತ್ವದ ಶಿಕ್ಷಣ ಕಾರ್ಯಕ್ರಮದಡಿ ರಾಜ್ಯಕ್ಕೆ ಬರಬೇಕಾಗಿರುವ 2,151 ಕೋಟಿ ರೂ. ಮೊತ್ತವನ್ನು ಕೇಂದ್ರ ಸರಕಾರ ತಡೆಹಿಡಿದಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ಗೆ ಹೋಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಜಾರಿಗೊಳಿಸುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಅದು ಹೀಗೆ ಮಾಡುತ್ತಿದೆ ಎಂದು ತಮಿಳುನಾಡು ಸರಕಾರ ಆರೋಪಿಸಿದೆ.
ಸಮಗ್ರ ಶಿಕ್ಷಾ ಕಾರ್ಯಕ್ರಮ (ಎಸ್ಎಸ್ಎಸ್)ದಡಿ 2024-25ರ ಸಾಲಿನ ಹಣವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಮಂಗಳವಾರ ಸಲ್ಲಿಸಿರುವ ಅರ್ಜಿಯಲ್ಲಿ ತಮಿಳುನಾಡು ಸರಕಾರ ಕೋರಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ರಾಜ್ಯ ಸರಕಾರದ ನಿರಾಕರಣೆ ಮತ್ತು ಮೂರು ಭಾಷಾ ನೀತಿಗೆ ರಾಜ್ಯ ಸರಕಾರದ ವಿರೋಧದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ನಿಧಿಯನ್ನು ತಡೆಹಿಡಿಯಲಾಗಿದೆ ಎಂದು ತಮಿಳುನಾಡು ಆರೋಪಿಸಿದೆ.
”ಎಸ್ಎಸ್ಎಸ್ ಕಾರ್ಯಕ್ರಮದಡಿ ರಾಜ್ಯಕ್ಕೆ ಬರಬೇಕಾಗಿರುವ ನಿಧಿಯನ್ನು ಪ್ರತಿವಾದಿದಾರರು (ಕೇಂದ್ರ ಸರಕಾರ) ತಡೆಹಿಡಿದಿರುವುದು ಸಹಕಾರಿ ಒಕ್ಕೂಟ ತತ್ವದ ಉಲ್ಲಂಘನೆಯಾಗಿದೆ, ಸಂವಿಧಾನದ ಉಲೇಖ 25, ಲಿಸ್ಟ್ ಮೂರರಡಿ ಕಾನೂನುಗಳನ್ನು ಮಾಡುವ ರಾಜ್ಯ ಸರಕಾರದ ಸಾಂವಿಧಾನಿಕ ಅಧಿಕಾರದ ನಿರಾಕರಣೆಯಾಗಿದೆ ಹಾಗೂ ಎನ್ಇಪಿ-2020ನ್ನು ಸಮಗ್ರವಾಗಿ ರಾಜ್ಯದಲ್ಲಿ ಜಾರಿಗೊಳಿಸುವಂತೆ, ಆ ಮೂಲಕ ರಾಜ್ಯ ಸರಕಾರ ಅನುಸರಿಸುತ್ತಿರುವ ಶಿಕ್ಷಣ ನೀತಿಯಿಂದ ದೂರ ಸರಿಯುವಂತೆ ರಾಜ್ಯವನ್ನು ಬಲವಂತಪಡಿಸುವ ತಂತ್ರವಾಗಿದೆ” ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಆರೋಪಿಸಿದೆ.