ಮಣಿಪಾಲದಲ್ಲಿ ಕೃತಕ ಪ್ರವಾಹ: ಮಳೆ ನೀರಿನಿಂದ ರಸ್ತೆ ನದಿಯಾಗಿ ಪರಿವರ್ತನೆ

ಉಡುಪಿ : ಉಡುಪಿ ಜಿಲ್ಲೆಯ ಪ್ರಮುಖ ಶೈಕ್ಷಣಿಕ ಮತ್ತು ಆರೋಗ್ಯದ ಹಬ್ ಆಗಿರುವ ಮಣಿಪಾಲದಲ್ಲಿ ಮಳೆಯಿಂದಾಗಿ ಉಡುಪಿ-ಮಣಿಪಾಲ ರಸ್ತೆಯುದ್ದಕ್ಕೂ ಕೃತಕ ಪ್ರವಾಹ ನಿರ್ಮಾಣವಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ.
ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ನದಿಯಂತೆ ನೀರು ಹರಿದಿದ್ದು, ನೀರಿನ ಜೊತೆಗೆ ಕಲ್ಲು ಮಣ್ಣುಗಳು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಉಡುಪಿಯ ಪ್ರಮುಖ ರಸ್ತೆಯಾಗಿರುವ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ ಎಂದು ಹೇಳಲಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ, ಅವರಲ್ಲಿ ಅನೇಕರು ನೀರಿನ ಮಟ್ಟ ಹೆಚ್ಚಾದಂತೆ ತಮ್ಮ ವಾಹನಗಳನ್ನು ನಿಯಂತ್ರಿಸಲು ಹೆಣಗಾಡುತ್ತಿರುವುದು ಕಂಡುಬಂದಿತು.
ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳು ಸಹ ಮುಳುಗಿದ ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟಕರವಾಗಿತ್ತು. ಬೆಳಿಗ್ಗೆಯಿಂದಲೇ ಇದೇ ಪರಿಸ್ಥಿತಿ ಹಿನ್ನಲೆ ವಿಧ್ಯಾರ್ಥಿಗಳು ತೊಂದರೆ ಅನುಭವಿಸಿದ್ದು, ಅಲ್ಲದೆ ಮಣಿಪಾಲಕ್ಕೆ ಪರ್ಯಾಯ ಮಾರ್ಗಗಳ ಮೂಲಕ ತೆರಳಿದ್ದಾರೆ.
ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹು ಮಹಡಿ ಕಟ್ಟಡಗಳು ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಡುಪಿ ಶಾಸಕ ಯಶ್ಪಾಲ್(Yashpal) ಸುವರ್ಣ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾದ ಎಲ್ಲಾ ಕಟ್ಟಡದ ಪಾರ್ಕಿಂಗ್ ಪ್ರದೇಶಗಳನ್ನು ತೆರವು ಮಾಡಬೇಕು ಎಂದು ಆದೇಶ ನೀಡಿದರು.