ಭಾರತೀಯ ವಾಯುದಾಳಿ ಬಗ್ಗೆ ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟಿದ ಫೇಕ್ ಕ್ಲಿಪ್ಎಷ್ಟು ಸತ್ಯ?

ಬೆಂಗಳೂರು: ಭಾರತ ಮಂಗಳವಾರ ತಡರಾತ್ರಿ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ( ಪಿಒಜೆಕೆ ) ದಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಕೊಟ್ಟ ಉತ್ತರ ಇದಾಗಿದೆ. ಇದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿಗಳ ದಾಳಿ ಮಾಡಿದಾಗ, ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಅವುಗಳನ್ನು ಹೊಡೆದುರುಳಿಸಿದವು ಎಂದು ಹೇಳಲಾಗುತ್ತಿದೆ.

ವೈರಲ್ ಆಗುತ್ತಿರುವುದೇನು?
ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ಈ ಪಾಕಿಸ್ತಾನಿ F17 ಜೆಟ್ ಭಾರತಕ್ಕೆ ಬಂದಿತು. ಆದರೆ, ಭಾರತೀಯ ಸೇನೆ ಅದನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.F17 ಜೆಟ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆಯೇ?:
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ವೈರಲ್ ಆಗುತ್ತಿರುವ ವಿಡಿಯೋ ನಿಜವಾದ ಕ್ಷಿಪಣಿ ದಾಳಿಯದ್ದಲ್ಲ, ಬದಲಾಗಿ ಇದು ಸಿಮ್ಯುಲೇಶನ್ ಗೇಮಿಂಗ್ ಕ್ಲಿಪ್ ಆಗಿದೆ. ಸಿಮ್ಯುಲೇಶನ್ ಫೂಟೇಜ್ ಎಂದರೆ ಕಂಪ್ಯೂಟರ್-ರಚಿತ ಚಿತ್ರಣ (CGI) ಅಥವಾ ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ-ಪ್ರಪಂಚದ ಘಟನೆಗಳನ್ನು ಅನುಕರಿಸುವ ಮೂಲಕ ರಚಿಸಲಾದ ವಿಡಿಯೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಕೀ ಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಸೈಯೋಂಜಿ ರೇ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ನಾವು ಹಲವಾರು ರೀತಿಯ ವಿಡಿಯೋಗಳನ್ನು ಕಂಡುಕೊಂಡಿದ್ದೇವೆ.
ಅದೇ ಚಾನೆಲ್ನಲ್ಲಿ ಹುಡುಕಿದಾಗ, ಮೂರು ವರ್ಷಗಳ ಹಿಂದೆ ಅಪ್ಲೋಡ್ ಮಾಡಲಾದ ವೈರಲ್ ವಿಡಿಯೋ ಕ್ಲಿಪ್ನ ದೀರ್ಘ ಆವೃತ್ತಿಯ ಮತ್ತೊಂದು ವಿಡಿಯೋ ನಮಗೆ ಸಿಕ್ಕಿತು.
ಈ ಚಾನಲ್ನಲ್ಲಿ ನಾವು ಅಂತಹ ಹಲವಾರು ವಿಡಿಯೋಗಳನ್ನು ಕಂಡುಕೊಂಡಿದ್ದೇವೆ. ಈ ಎಲ್ಲಾ ವಿಡಿಯೋಗಳು ಸಿಮ್ಯುಲೇಟೆಡ್ ಗೇಮಿಂಗ್ ವಿಡಿಯೋಗಳಾಗಿವೆ. ನಮ್ಮ ತನಿಖೆಯಿಂದ ವೈರಲ್ ವಿಡಿಯೋ ನಿಜವಾದದ್ದಲ್ಲ, ಬದಲಾಗಿ ಸಿಮ್ಯುಲೇಟೆಡ್ ಗೇಮಿಂಗ್ ದೃಶ್ಯಾವಳಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ 15 ದಿನಗಳ ನಂತರ, ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುದಾಳಿಗಳನ್ನು ನಡೆಸಿದೆ. ಈ ದಾಳಿಯ ಬಗ್ಗೆ ಸೇನೆಯು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಸರ್ಜಲ್ ಕ್ಯಾಂಪ್, ಸಿಯಾಲ್ಕೋಟ್ ಮತ್ತು ಇತರ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಭಾರತ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಅಡಗುತಾಣಗಳಲ್ಲಿ ಜೈಶ್-ಎ-ಮೊಹಮ್ಮದ್ನ ಪ್ರಧಾನ ಕಚೇರಿಯೂ ಸೇರಿದೆ. ಇದಲ್ಲದೆ, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಶಿಬಿರಗಳನ್ನು ಸಹ ನಾಶಪಡಿಸಲಾಗಿದೆ. ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮತ್ತು ಜೈಶ್-ಎ-ಮೊಹಮ್ಮದ್ನ ಪ್ರಧಾನ ಕಚೇರಿ ಇರುವ ಬಹವಾಲ್ಪುರದಲ್ಲಿ ಅತಿದೊಡ್ಡ ದಾಳಿ ನಡೆಸಲಾಯಿತು. ಭಾರತೀಯ ಸೇನೆಯು ಯಾವುದೇ ಪೂರ್ವಸಿದ್ಧತೆಯಿಲ್ಲದೆ ಮತ್ತು ಯಾವುದೇ ತಪ್ಪಿಲ್ಲದೆ ಕಾರ್ಯಾಚರಣೆ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದು ನಮಗೆ ಹೆಮ್ಮೆಯ ಕ್ಷಣ. ಪ್ರಧಾನಿ ಮೋದಿ ಸೇನೆಯನ್ನು ಶ್ಲಾಘಿಸಿದರು.