1 ರೂ. ಹೆಚ್ಚಾಗಿ ಪಡೆದದ್ದಕ್ಕೆ ಕೆಎಸ್ಆರ್ಟಿಸಿ ಕಟ್ಟಬೇಕಾಯಿತು 30,000 ದಂಡ

ಮೈಸೂರು:ನಾವು ಬಸ್ನಲ್ಲಿ (Bus) ಪ್ರಯಾಣ ಮಾಡುವಾಗ ಕಂಡಕ್ಟರ್ಗಳು ಚಿಲ್ಲರೆ (Change) ಇಲ್ಲ ಎಂದರೆ ಆಮೇಲೆ ಕೊಡುತ್ತೇವೆ ಎಂದು ಹೇಳುತ್ತಾರೆ. ಅವರಿಂದ ವಾಪಾಸ್ ಚಿಲ್ಲರೆ ಪಡೆಯಲು ಕೆಲವು ಬಾರಿ ಹರಸಾಹಸ ಮಾಡಬೇಕಾಗಿ ಬರುತ್ತದೆ. ಕೆಲವೊಮ್ಮೆ ಚಿಲ್ಲರೆ ಸಿಗದೇ ಹಾಗೆಯೇ ಇಳಿದು ಬಂದ ಅನೇಕ ಪ್ರಸಂಗಗಳು ಇದೆ.

ಆದರೆ ಇಲ್ಲಿ ವಿಚಾರವೇ ಬೇರೆ, ಪ್ರಯಾಣಿಕರಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ ಕಾರಣಕ್ಕೆ ಕೆಎಸ್ಆರ್ಟಿಸಿ (KSRTC) ಸಾವಿರಾರೂ ರೂಪಾಯಿ ದಂಡ ಕಟ್ಟುವ ಪರಿಸ್ಥಿತಿ ಬಂದಿದ್ದು, ಏನಿದು ವಿಚಾರ? ಇಲ್ಲಿದೆ ನೋಡಿ
1 ರೂಪಾಯಿ ಹೆಚ್ಚು ಪಡೆದಿದ್ದ ಕೆಎಸ್ಆರ್ಟಿಸಿ
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನ ನೀಡಿದೆ. ಆದರೆ ಹಾಗೆಯೇ, ಬಸ್ಗಳ ದರವನ್ನ ಸಹ ಹೆಚ್ಚು ಮಾಡಿದೆ. ಅದರಲ್ಲೂ ಬೇರೆ ಊರುಗಳಿಗೆ ಹೋಗುತ್ತಿದ್ದ ರಾಜಹಂಸ ಬಸ್ಗಳನ್ನ ನಿಲ್ಲಿಸಿ, ಸ್ಲೀಪರ್ ಕೋಚ್ ಬಸ್ಗಳನ್ನ ಮಾತ್ರ ಆರಂಭಿಸಿ ಅದರಿಂದ ಸಹ ಜನರನ್ನ ಸುಲಿಗೆ ಮಾಡುತ್ತಿದೆ. ಈ ಎಲ್ಲದರ ನಡುವೆ ಪ್ರಯಾಣಿಕರಿಂದ ರೌಂಡ್ ಅಪ್ ಎನ್ನುವ ಸೇರಿನಲ್ಲಿ ಸಹ ಹಣ ಪಡೆಯುತ್ತಿದ್ದು, ಅದು ಕೆಎಸ್ಆರ್ಟಿಸಿಗೆ ಮುಳುವಾಗಿದೆ. ಹೌದು ನಿಗದಿತ ದರಕ್ಕಿಂತ ಒಂದು ರೂಪಾಯಿ ಹೆಚ್ಚಾಗಿ ಪಡೆದ ಕಾರಣ ಪ್ರಯಾಣಿಕರೊಬ್ಬರು ಕೇಸ್ ದಾಖಲು ಮಾಡಿದ್ದರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಯಾಣಿಕ ಗೆದ್ದು ಬೀಗಿದ್ದು, ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕೆಎಸ್ಆರ್ಟಿಸಿ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ಹಾಕಿದೆ.
ಏನಿದು ಪ್ರಕರಣ?
ಮೈಸೂರು ಮೂಲದ ವಕೀಲ ಜೆ. ಕಿರಣ್ ಕುಮಾರ್ ಎನ್ನುವವರು 2024ರ ಡಿಸೆಂಬರ್ 31ರಂದು ಮೈಸೂರಿನಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಐರಾವತ ಮಲ್ಟಿ-ಆಕ್ಸಲ್ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಬಸ್ನಲ್ಲಿ ಟಿಕೆಟ್ ದರ 370 ರೂಪಾಯಿ ಹಾಗೂ ಜಿಎಸ್ಟಿ 19 ನಿಗದಿ ಮಾಡಲಾಗಿದೆ. ಕಿರಣ್ ಕುಮಾರ್ ಈ ಟಿಕೆಟ್ ದರವನ್ನ ಯುಪಿಐ ಮೂಲಕ ಪಾವತಿ ಮಾಡಿದ್ದಾರೆ. ಆದರೆ 389 ಪಡೆಯುವ ಬದಲಾಗಿ 390 ರೂಪಾಯಿಗಳನ್ನ ಕಂಡಕ್ಟರ್ ತೆಗೆದುಕೊಂಡಿದ್ದಾರೆ. ಅನೇಕ ಕಡೆ ಚಿಲ್ಲರೆ ಕೊಡಲು ಕಷ್ಟ ಆಗುವುದರಿಂದ ಈ ರೀತಿ ರೌಂಡ್ ಅಪ್ ಮಾಡಲಾಗುತ್ತಿದ್ದು, ಇದನ್ನ ಇಲ್ಲಿ ಸಹ ಮಾಡಿದ್ದು, ಅದರಿಂದ ಈಗ ಸಂಸ್ಥೆ ದಂಡ ಕಟ್ಟುವಂತಾಗಿದೆ.
1 ರೂಪಾಯಿ ಹೆಚ್ಚಿಗೆ ಪಡೆದಿರುವುದನ್ನ ಗಮನಿಸಿದ ವಕೀಲ ಕಿರಣ್, ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ರೀತಿ ಒಬ್ಬೊಬ್ಬರಿಂದ 1 ರೂಪಾಯಿ ಪಡೆದುಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ. ಅದರಲ್ಲೂ ಯುಪಿಐ ಪಾವತಿ ಮಾಡಿದ್ದರೂ ಸಹ ಸುಮ್ಮನೆ ಒಂದು ರೂಪಾಯಿ ಹೆಚ್ಚಿಗೆ ಪಡೆದುಕೊಂಡಿದೆ. ಅಲ್ಲದೇ, ಸುಮಾರು 12 ಕೋಟಿಯಷ್ಟು ಜನ ವರ್ಷದಲ್ಲಿ ಐಷಾರಾಮಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ಇದರಿಂದ ಸಂಸ್ಥೆಗೆ ಒಂದು ರೂಪಾಯಿಯಂತೆ 12 ಕೋಟಿಯಷ್ಟು ಲಾಭವಾಗುತ್ತದೆ. ಈ ರೀತಿ ಜನರಿಗೆ ಮೋಸ ಮಾಡುವುದು ಸರಿಯಲ್ಲ ಎಂದು ವಕೀಲರು ಪ್ರಶ್ನೆ ಮಾಡಿದ್ದು, ಕೋರ್ಟ್ ಸಹ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಮಾನಸಿಕ ನೋವಿಗೆ 25 ಸಾವಿರ ಹಾಗೂ ನ್ಯಾಯಾಲಯದ ವೆಚ್ಚ 5 ಸಾವಿರ ಹಾಗೂ ಹೆಚ್ಚು ಪಡೆದ 1 ರೂಪಾಯಿ ಸೇರಿ ಸುಮಾರು 30 ಸಾವಿರದ ಒಂದು ರೂಪಾಯಿ ದಂಡವನ್ನ ಒಂದು ತಿಂಗಳ ಒಳಗೆ ಪಾವತಿ ಮಾಡುವಂತೆ ಆದೇಶ ನೀಡಿದೆ.