BMW ಕಾರು ಕೊಡಿಸಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ: ತೆಲಂಗಾಣದಲ್ಲಿ ಆಘಾತಕಾರಿ ಘಟನೆ

ತೆಲಂಗಾಣ : ಈ ಕಾಲದ ಮಕ್ಕಳು ಹೇಗಾಗಿದ್ದಾರೆ ಅಂದ್ರೆ ಕೇಳಿದ್ದು ಬೇಕು..ಕಂಡಿದ್ದು ಬೇಕು. ಒಂದು ವೇಳೆ ಪೋಷಕರು ಸ್ವಲ್ಪ ಮೀನಮೇಷ ಎಣಿಸಿದ್ರೂ ದುಕುಡಿನ ನಿರ್ಧಾರಕ್ಕೆ ಮಕ್ಕಳು ಬಲಿಯಾಗುವ ಘಟನೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಇಲ್ಲೊಬ್ಬ ಯುವಕ ತಾನು ಇಷ್ಟಪಟ್ಟ ಕಾರನ್ನು ತನ್ನ ತಂದೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಗದ್ವೇಲ್ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಚಟ್ಲಪಲ್ಲಿ ಗ್ರಾಮದ ಬೊಮ್ಮ ಕನಕಯ್ಯ ಎಂಬುವವರ ಮಗ 21 ವರ್ಷದ ಜಾನಿ ಮೃತ ಯುವಕ.
ಈತನ ತಂದೆ ಕನಕಯ್ಯ ಕೃಷಿ ಮಾಡುವ ರೈತ. ಕೆಲವು ದಿನಗಳ ಹಿಂದೆ ಪುತ್ರ ಜಾನಿ ತನಗೆ BMW ಕಾರು ಕೊಡಿಸಿ ಇಲ್ಲದಿದ್ದರೆ ತಾನು ಸಾಯುತ್ತೇನೆ ಎಂದು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದ್ರೆ ಸದ್ಯಕ್ಕೆ ಹಣವಿಲ್ಲ ಎಂದು ತಂದೆ ಹಲವು ಬಾರಿ ಬುದ್ಧಿ ಹೇಳಿದ್ದಾರೆ. ಆದರೂ ಜಾನಿ ತಂದೆ ಮಾತು ಕೇಳಿಲ್ಲ.
ಆದ್ರೆ ಪುತ್ರನ ಒತ್ತಾಯಕ್ಕೆ ಮಣಿದು ತಂದೆ ಮಾರುತಿ ಡಿಸೈರ್ ಕಾರು ಕೊಡಿಸಲು ಮುಂದಾಗಿದ್ದಾರೆ. ಆದ್ರೆ ಮಾರುತಿ ಕಾರಿನ ಬದಲು ಬಿಎಂಡಬ್ಲ್ಯೂ ಕಾರು ಬೇಕೆಂದು ಮಗ ಪಟ್ಟು ಹಿಡಿದಿದ್ದಾನೆ. ಈ ವೇಳೆ ಜಮೀನಿನಲ್ಲಿ ಕೀಟನಾಶಕ ಸೇವಿಸಿ ಪ್ರಜ್ಞೆ ತಪ್ಪಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.ಆದ್ರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.