ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಜೀಪ್ ಓಡಿಸಿದ ಯುವಕ: ಶಹಾಬಾದ್ನಲ್ಲಿ ಸಿನಿಮೀಯ ಘಟನೆ

ಕಲಬುರಗಿ : ಶಹಾಬಾದ್: ಗುಂಡಿನ ದಾಳಿಯಿಂದ ಬಚಾವ್ ಆಗಲು ಹೈವೇ ಪೆಟ್ರೋಲಿಂಗ್ ಪೊಲೀಸ್ ಜೀಪನ್ನೇ ಓಡಿಸಿಕೊಂಡು ಹೋಗಿ ಯುವಕನೋರ್ವ ಸಿನಿಮೀಯ ಶೈಲಿಯಲ್ಲಿ ಪಾರಾದ ಘಟನೆ ಇಲ್ಲಿನ ಭಂಕೂರಿನ ಐನಾಪೂರ ಬಳಿ ನಡೆದಿದೆ.

ಶಹಾಬಾದ್ ನಿವಾಸಿ ಶಂಕರ ಅಳ್ಳೋಳ್ಳಿ ತನ್ನ ಸಂಬಂಧಿಕರು, ಸ್ನೇಹಿತರೊಂದಿಗೆ ಡಾಬಾದಲ್ಲಿ ರಾತ್ರಿ ಭೋಜನ ಸೇವಿಸುತ್ತಿದ್ದರು. ಏಳೆಂಟು ಜನರ ಗುಂಪು ಡಾಬಾಗೆ ನುಗ್ಗಿ ಗುಂಡಿನ ದಾಳಿ ನಡೆಸಿದೆ. ಆಗ ಡಾಬಾದ ಹಿಂಬದಿಯಿಂದ ಹೈವೇಗೆ ಶಂಕರ ಬಂದಿದ್ದಾರೆ.
ಅಲ್ಲೇ ಸಮೀಪದಲ್ಲಿದ್ದ ಪೊಲೀಸರು, ಗಲಾಟೆ ಶಬ್ದ ಕೇಳಿ ಜೀಪು ನಿಲ್ಲಿಸಿ ಡಾಬಾಗೆ ಧಾವಿಸಿದ್ದಾರೆ. ಈ ವೇಳೆ ಪೊಲೀಸರ ಜೀಪು ಏರಿದ ಶಂಕರನಿಗೆ ಕೀ ಗಾಡಿಯಲ್ಲೇ ಇರುವುದು ಕಂಡಿದೆ. ಆತ ಜೀವ ಭಯದಲ್ಲಿ ಜೀಪನ್ನು ಓಡಿಸಿಕೊಂಡು ಹೋಗಿ ಪಾರಾಗಿದ್ದಾನೆ.
ಕೊಲೆ ಪ್ರಕರಣದ ದ್ವೇಷಕ್ಕೆ ಶಂಕರನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.