‘ನೀವು ಹೀರೋ ಮೆಟಿರಿಯಲ್ ಅಲ್ಲ, ಆದರೂ ಹೇಗೆ ಹೀರೋ ಆದಿರಿ?’: ತೆಲುಗು ಸಿನಿಮಾ ಪ್ರಚಾರದಲ್ಲಿ ತಮಿಳು ನಟ ಪ್ರದೀಪ್ ರಂಗನಾಥನ್ಗೆ ಪತ್ರಕರ್ತೆಯಿಂದ ತೀವ್ರ ಅವಮಾನ!

ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬರುವ ನಟರು ತಮ್ಮ ಸಿನಿಮಾ ಪಯಣದ ಪ್ರತಿ ಹೆಜ್ಜೆಯಲ್ಲಿಯೂ ಅವಮಾನ ಎದುರಿಸಬೇಕಾಗುತ್ತದೆ. ಅದರಲ್ಲೂ ನಾಯಕನಾಗು ಕನಸು ಕಂಡು ಬಂದಿದ್ದರಂತೂ ಕತೆ ಮುಗಿದಂತೆ. ಕನ್ನಡದ ಡಾಲಿ ಧನಂಜಯ್, ದುನಿಯಾ ವಿಜಯ್, ಗಣೇಶ್ ಅಂಥಹವರು ಇಂಥಹಾ ಸಾಕಷ್ಟು ಅವಮಾನಗಳನ್ನು ಎದುರಿಸಿ ಈಗಿರುವ ಸ್ಥಿತಿ ತಲುಪಿದ್ದಾರೆ. ಇದೀಗ ತಮಿಳಿನ ಯುವ ನಾಯಕನೊಬ್ಬನಿಗೆ ತೆಲುಗಿನಲ್ಲಿ ತೀವ್ರ ಅವಮಾನ ಆಗಿದೆ. ಆದರೆ ಈ ಘಟನೆಯನ್ನು ತೆಲುಗಿನ ಕೆಲವು ಸೆಲೆಬ್ರಿಟಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಪ್ರದೀಪ್ ರಂಗನಾಥನ್ ತಮಿಳಿನ ಯುವ ಹೀರೋ. ನೋಡಲು ಕಪ್ಪಗೆ, ತೆಳ್ಳಗೆ ಇರುವ ಗುಂಗುರು ಕೂದಲಿನ ವ್ಯಕ್ತಿ ಪ್ರದೀಪ್ ರಂಗನಾಥನ್ ತಮಿಳು ಚಿತ್ರರಂಗದ ಯುವ ನಾಯಕ ನಟ. ಈಗಾಗಲೇ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದು ಎರಡೂ ಸಿನಿಮಾ ಸೂಪರ್ ಹಿಟ್ ಆಗಿವೆ. ಅದರಲ್ಲೂ ‘ಲವ್ ಟುಡೆ’ ಸಿನಿಮಾ ಅಂತೂ ಬ್ಲಾಕ್ ಬಸ್ಟರ್ ಆಗಿದೆ. ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಾ ಈಗ ಹೀರೋ ಕಮ್ ನಿರ್ದೇಶಕ ಆಗಿರುವ ಪ್ರದೀಪ್ ಅವರ ಕೈಯಲ್ಲಿ ಈಗಾಗಲೇ ಕೆಲವು ಸಿನಿಮಾಗಳಿವೆ.
ಅವರ ನಟನೆಯ ‘ಡ್ಯೂಡ್’ ಸಿನಿಮಾದ ಪ್ರಚಾರಕ್ಕೆಂದು ಇತ್ತೀಚೆಗೆ ಅವರು ಹೈದರಾಬಾದ್ಗೆ ಬಂದಿದ್ದರು. ಆಗ ಪತ್ರಕರ್ತೆಯೊಬ್ಬರು ಪ್ರದೀಪ್ ರಂಗನಾಥನ್ ಅವರ ಲುಕ್ಸ್ ಬಗ್ಗೆ ಕಮೆಂಟ್ ಮಾಡಿದರು. ನೀವು ಹೀರೋ ಮೆಟಿರಿಯಲ್ ಅಲ್ಲ ಆದರೂ ನೀವು ಹೀರೋ ಆಗಿದ್ದಕ್ಕೆ ಅದೃಷ್ಟ ಕಾರಣವಾ ಅಥವಾ ಹಾರ್ಡ್ ವರ್ಕ್ ಕಾರಣವಾ? ಎಂದರು. ಪತ್ರಕರ್ತೆಯ ಪ್ರಶ್ನೆ, ಪ್ರಶ್ನೆ ಕೇಳಿದ ರೀತಿ ಪ್ರದೀಪ್ ಅವರನ್ನು ಅವಮಾನ ಪಡಿಸಬೇಕು ಎಂದೇ ಕೇಳಿದಂತಿತ್ತು.
ಪತ್ರಕರ್ತೆಯ ಈ ಪ್ರಶ್ನೆಗೆ ಕ್ಷಣ ಕಾಲ ವಿಚಲಿತರಾಗಿ ಏನು ಹೇಳಬೇಕೆಂದು ಪ್ರದೀಪ್ ಯೋಚಿಸುತ್ತಿರುವಾಗಲೇ ಪಕ್ಕದಲ್ಲೇ ಕೂತಿದ್ದ ಹಿರಿಯ ನಟ ಶರತ್ಕುಮಾರ್, ‘ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಅವನ ಪಾಲಿಗೆ ಅವನು ಹಿರೋ, ಒಬ್ಬ ಹೀರೋ ಹೀಗೆಯೇ ಇರಬೇಕು ಎಂಬ ಯಾವುದೇ ಮಾನದಂಡ ಇಲ್ಲ. ಎಲ್ಲರೂ ಅವರವರ ಪಾಲಿಗೆ ಹೀರೋಗಳೇ’ ಎಂದರು. ಶರತ್ ಮಾತಿಗೆ ದೊಡ್ಡ ಚಪ್ಪಾಳೆ ಸಹ ಧಕ್ಕಿತು. ಅದಾದ ಬಳಿಕ ಬೇರೊಂದು ಸಿನಿಮಾದ ಕಾರ್ಯಕ್ರಮದಲ್ಲಿಯೂ ಸಹ ಪರಭಾಷೆಯ ನಟರುಗಳು ಬಂದಾಗ ದಯವಿಟ್ಟು ಅವರೊಟ್ಟಿಗೆ ವಿನಯದಿಂದ ಇರಿ, ನಮ್ಮನ್ನು ಬೈಯ್ಯಿರಿ ಪರವಾಗಿಲ್ಲ ಆದರೆ ಪರಭಾಷೆಯ ನಟರು ಅತಿಥಿಗಳಾಗಿ ಬಂದಾಗ ಅವಮಾನ ಮಾಡಬೇಡಿ ಎಂದು ಪತ್ರಕರ್ತರ ಬಳಿ ಮನವಿ ಮಾಡಿದರು.
ಪ್ರದೀಪ್ ರಂಗನಾಥನ್ ತೀರ ಸಾಮಾನ್ಯ ಹಿನ್ನೆಲೆಯಿಂದ ಮೇಲಕ್ಕೇರಿ ಬಂದವರು. ಪ್ರದೀಪ್ ಅವರ ತಂದೆ ಈಗಲೂ ಸಹ ಜೆರಾಕ್ಸ್ ಶಾಪ್ ನಡೆಸುತ್ತಾರೆ. ಪ್ರದೀಪ್, ಎಂಜಿನಿಯರಿಂಗ್ ಕಾಲೇಜಿನಲ್ಲಿದ್ದಾಗ ಸೀನಿಯರ್ಸ್ ಜೊತೆ ಸೇರಿ ಶಾರ್ಟ್ ಫಿಲಂಗೆ ಕೆಲಸ ಮಾಡಿದ್ದರು. ಅಲ್ಲಿಂದ ಅವರು ಸಿನಿಮಾ ಕನಸು ಹಚ್ಚಿಕೊಂಡು ಹಲವಾರು ಶಾರ್ಟ್ ಫಿಲಂಗಳನ್ನು ತೆಗೆದರು. ಬಳಿಕ ‘ಲವ್ ಟುಡೆ’ ಹೆಸರಿನ ಸಿನಿಮಾ ಮಾಡಿ ಅದು ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ ‘ಡ್ರ್ಯಾಗನ್’ ಸೂಪರ್ ಹಿಟ್ ಆಯ್ತು. ಈಗ ‘ಡ್ಯೂಡ್’ ಹೆಸರಿನ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ‘ಲವ್ ಇನ್ಶುರೆನ್ಸ್ ಕಂಪೆನಿ’ ಸಿನಿಮಾ ಬಿಡುಗಡೆ ಆಗಲಿಕ್ಕಿದೆ.
ಸ್ಪುರದ್ರೂಪಿ ನಾಯಕರಂತೆ ಪ್ರದೀಪ್, ಬೆಳ್ಳಗೆ ಇಲ್ಲ, ಬಾಡಿ ಹೊಂದಿಲ್ಲ, ಕೇಶ ಸೌಂದರ್ಯವೂ ಇಲ್ಲ ಆದರೆ ಒಳ್ಳೆಯ ನಟನಾ ಪ್ರತಿಭೆ ಇದೆ ಎಲ್ಲದಕ್ಕಿಂತಲೂ ಹೆಚ್ಚಾಗಿ ಅದ್ಭುತ ಕಾನ್ಫಿಡೆನ್ಸ್ ಅವರಲ್ಲಿದೆ. ಅವರು ನಟಿಸುವಾಗ ಆ ಕಾನ್ಫಿಡೆನ್ಸ್ ಎದ್ದು ಕಾಣುತ್ತದೆ. ಅಲ್ಲದೆ ಅವರು ಒಂದರ ಹಿಂದೊಂದು ಅದ್ಭುತವಾದ ಕತೆಗಳನ್ನು ಆಯ್ಕೆ ಮಾಡಿಕೊಂಡು ನಟಿಸಿ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ.