ಸಹೋದರನ ರಕ್ಷಣೆ ವೇಳೆ ನೀರಿನಲ್ಲಿ ಮುಳುಗಿ ಯುವಕನ ಮರಣ – ಕಾಸರಗೋಡು ತಳಂಗರೆ ಕೆರೆಯಲ್ಲಿ ದುರಂತ

ಕಾಸರಗೋಡು: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ನಗರದ ತಳಂಗರೆಯಲ್ಲಿ ನಡೆದಿದೆ.
ಬೆಂಗಳೂರು ಡಿ.ಜೆ ಹಳ್ಳಿಯ ಫೈಝಾನ್(22) ಮೃತ ದುರ್ದೈವಿ.ಗಂಭೀರ ಸ್ಥಿತಿಯಲ್ಲಿದ್ದ ಸಹೋದರ ಸಕ್ಲೈನ್ (20)ನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ತಳಂಗರೆ ಯ ಮಾಲಿಕ್ ದಿನಾರ್ ಮಸೀದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಸೀದಿ ಹಿಂಬಾಗದ ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಸಕ್ಲೈನ್ ನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಫೈಝಾನ್ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ.ಭಾರೀ ಮಳೆಯಿಂದ ಕೆರೆ ತುಂಬಿ ತುಳುಕುತ್ತಿತ್ತು. ಸಹೋದರ ಕೆರೆಯಲ್ಲಿ ಮುಳುಗುತ್ತಿರುವುದನ್ನು ನೋಡಿದ ಫೈಝಾನ್ ಕೆರೆಗೆ ಹಾರಿ ರಕ್ಷಿಸಲು ಯತ್ನಿಸುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಫೈಝಾನ್ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಝಿಯಾರತ್ ಗಾಗಿ ಬೆಂಗಳೂರಿನಿಂದ 11 ಮಂದಿಯ ತಂಡವು ಮಂಗಳವಾರ ಮಾಲಿಕ್ ದಿನಾರ್ ಮಸೀದಿಗೆ ಆಗಮಿಸಿತ್ತು. ಇವರೆಲ್ಲರೂ ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಮರಳುವವರಿದ್ದರು.