ಯೋಗೀಶ್ಗೌಡ ಕೊಲೆ ಕೇಸ್ ಸಾಕ್ಷ್ಯನಾಶ ಪ್ರಕರಣ – ಶಾಸಕ ವಿನಯ್ ಕುಲಕರ್ಣಿಗೆ ಹಿನ್ನಡೆ; ಸಿಬಿಐ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್

ಧಾರವಾಡ: ಯೋಗೀಶ್ಗೌಡ ಕೊಲೆ ಕೇಸ್ನಲ್ಲಿ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಮತ್ತೆ ಸಂಕಷ್ಟ ಎದುರಾಗಿದೆ. ಸಾಕ್ಷ್ಯನಾಶ ಕೇಸ್ನಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಪುರಸ್ಕರಿಸಿದೆ.

2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯ ಸಾಕ್ಷ್ಯನಾಶ ಮಾಡಲು ಪ್ರಯತ್ನ ಮಾಡಿದ್ದರು ಎಂದು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮೇಲೆ ಸಿಬಿಐ ಅಧಿಕಾರಿಗಳು ಸಾಕ್ಷಿ ನಾಶದ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ತಿಂಗಳ ಹಿಂದೆ ಹೈಕೋರ್ಟ್ ಸಾಕ್ಷ್ಯನಾಶದ ಅರ್ಜಿ ವಜಾ ಮಾಡಿತ್ತು. ಅರ್ಜಿ ವಜಾ ಪ್ರಶ್ನಿಸಿ, ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಸುಪ್ರೀಂಕೋರ್ಟ್ ಸಿಬಿಐ ಅರ್ಜಿ ಪುರಸ್ಕರಿಸಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಸಾಕ್ಷ್ಯನಾಶದ ಪ್ರಕರಣದಲ್ಲಿ ಹಿನ್ನಡೆಯಾಗಿದೆ.
ಯೋಗೀಶ್ಗೌಡ ಕೊಲೆಯಾದ ನಂತರ ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದನ್ನ ಸಿಬಿಐಗೆ ನೀಡಿತ್ತು. ಸದ್ಯ ಇದೇ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲು ಸೇರಿದ್ದಾರೆ.