ಹೆತ್ತ ತವರಿಂದ ಹಣ ಕದ್ದು ಸಾಲ ತೀರಿಸಿದ ಮಹಿಳೆ !

ಬೆಂಗಳೂರು:ಹೊಸ ಮನೆ ಖರೀದಿ ವೇಳೆ ಮಾಡಿದ್ದ ಸಾಲ ತೀರಿಸಲು ತವರುಮನೆಯಲ್ಲಿಯೇ ಕಳ್ಳತನ ಮಾಡಿದ್ದ ಮಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಗ್ಗದಾಸನಪುರ ನಿವಾಸಿ ಶೋಭಾ (36) ಬಂಧಿತೆ. ಯಮಲೂರು ಗ್ರಾಮದಲ್ಲಿ ಇರುವ ಇವರ ತಂದೆ ರಾಜು ಮನೆಯಲ್ಲಿ ಕೃತ್ಯ ಎಸಗಿದ್ದ ಈಕೆಯಿಂದ 21 ಲಕ್ಷ ರೂ.
ಮೌಲ್ಯದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಗ್ಗದಾಸನಪುರದಲ್ಲಿ ಹೊಸ ಮನೆಯನ್ನು ಶೋಭಾ ಖರೀದಿ ಮಾಡಿದ್ದು, ಅದಕ್ಕಾಗಿ ಸಾಲ ಮಾಡಿಕೊಂಡಿದ್ದಳು. ಈ ಸಲುವಾಗಿ ಹಣ ಕೊಡುವಂತೆ ತವರುಮನೆಯಲ್ಲಿ ಮನವಿ ಮಾಡಿದ್ದಳು. ಆದರೆ ಲಿಸಿರಲಿಲ್ಲ. ಮಾ. 20ರಂದು ರಾಜು ಕುಟುಂಬಸಮೇತರಾಗಿ ಕಾಶಿ ಯಾತ್ರೆಗೆ ಹೋಗಿದ್ದಾಗ ನಕಲಿ ಕೀ ಬಳಸಿ ಚಿನ್ನಾಭರಣ ಕಳವು ಮಾಡಿದ್ದಳು.
ಕದ್ದ ಚಿನ್ನದ ಪೈಕಿ 30 ಗ್ರಾಂ ಆಭರಣ ಅಂಗಡಿಯಲ್ಲಿ ಅಡವಿಟ್ಟಿದ್ದು, ಉಳಿದವುಗಳನ್ನು ಮನೆಯಲ್ಲಿ ಬಚ್ಚಿಟ್ಟಿದ್ದಳು. ಮಾ. 23ರಂದು ಕಾಶಿಯಿಂದ ವಾಪಸ್ ಬಂದ ರಾಜು ಕುಟುಂಬ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮಾರತ್ತಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಪಿ.ಎನ್. ಅನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ದೂರುದಾರ ನೀಡಿದ ಸುಳಿವಿನ ಮೇರೆಗೆ ಶೋಭಾಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.