ಗಂಡನ ಉಪದಾನಕ್ಕಾಗಿ ಹೋದ ಮಹಿಳೆಗೆ ಲಂಚ ಬೇಡಿಕೆ: ಅಧಿಕಾರಿಗಳು ಬಂಧನ

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಖಜಾನೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದ.ಕ ಜಿಲ್ಲೆಯ ಬಿ.ಸಿ.ರೋಡ್ ಬಳಿಯ ಬಂಟ್ವಾಳ ತಾಲೂಕು ಖಜಾನೆ ಕಚೇರಿಯಲ್ಲಿ ನಡೆದಿದೆ.
ಮಹಿಳೆಯೊಬ್ಬರ ಬಳಿ ಖಜಾನೆ ಮುಖ್ಯ ಲೆಕ್ಕಿಗ ಹಾಗೂ ಎಫ್.ಡಿ.ಎ ಲಂಚದ ಬೇಡಿಕೆ ಇಟ್ಟಿದ್ದರು.
ಮಹಿಳೆಯ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. 2023ರ ಅಕ್ಟೋಬರ್ ತಿಂಗಳಿನಲ್ಲಿ ವಯೋನಿವೃತ್ತಿ ಹೊಂದಿದ್ದು, ಜೂನ್ 2024 ರಂದು ಮರಣ ಹೊಂದಿದ್ದರು.
ಬಳಿಕ ಮಹಿಳೆ ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಬಳಿ ಗಂಡನ ಮರಣ ಉಪದಾನ ನೀಡುವಂತೆ ಕೇಳಿದ್ದರು. ಈ ಬಗ್ಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರುವುದಿಲ್ಲ. ಹಣ ಜಮೆ ಮಾಡಲು ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಎಫ್.ಡಿ.ಎ ಬಸವೆ ಗೌಡನಿಂದ ಐದು ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಮಹಿಳೆ ನೀಡಿದ್ದರು. ಇಂದು ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಇಬ್ಬರು ಸಿಬ್ಬಂದಿ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.