ಮಕ್ಕಳ ಜಗಳದಿಂದ ಮಹಿಳೆಯ ಕೊಲೆ; 3 ಆರೋಪಿಗಳು ಬಂಧನ

ಲಕ್ನೋ: ಮಕ್ಕಳ ನಡುವಿನ ಸಣ್ಣ ಜಗಳ ಮಾರಕವಾಗಿ ತಿರುಗಿ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಸುನಿತಾ ಕೆಲಸ ಮಾಡುತ್ತಿದ್ದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸುನೀತಾ ಅವರ ಮೊಮ್ಮಗ ನೀರು ತರಲು ಹೋಗಿ ಇತರ ಮಕ್ಕಳೊಂದಿಗೆ ಜಗಳವಾಡಿದಾಗ ವಾಗ್ವಾದ ಶುರುವಾಗಿತ್ತು.ವಿಷಯ ಬೇಗನೆ ಉಲ್ಬಣಗೊಂಡು ದೊಡ್ಡವರ ಬಳಿಗೆ ತಲುಪಿತ್ತು. ಹಿಂಸಾತ್ಮಕ ಘರ್ಷಣೆಯಲ್ಲಿ ಅಂತ್ಯಗೊಂಡಿತ್ತು.
ಪೊಲೀಸರ ಪ್ರಕಾರ, ಸೀತಾಪುರ ಜಿಲ್ಲೆಯ ಸಿಧೌಲಿಯ ನಿವಾಸಿಗಳಾದ ರಾಜ್ಕುಮಾರ್ ಮತ್ತು ರಾಮ್ಕಿಶೋರ್ ಮತ್ತು ಕಮಲಾಪುರದ ರಾಮ್ಭರೋಸ್ ಸುನೀತಾ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲು ಕೈಯಿಂದಲೇ ಹಲ್ಲೆ ನಡೆಸಿ ಬಳಿಕ ಪದೇ ಪದೇ ಇಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ತಿಳಿಸಿದ್ದಾರೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ರಾಮಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ.
ಘಟನೆಯ ನಂತರ, ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಪೊಲೀಸರು ಆರಂಬಾ ಕಾಲುವೆ ಸೇತುವೆಯ ಬಳಿ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಿದ್ದಾರೆ.
ಸುನೀತಾ ಅವರ ಪತಿ ಖೇಲವಾನ್ ಮಾಂಝಿ ಅವರು ನೀಡಿದ ದೂರಿನ ಆಧಾರದ ಮೇಲೆ ಇಟೌಂಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಉತ್ತರ ವಲಯ ಡಿಸಿಪಿ ಗೋಪಾಲ್ ಚೌಧರಿ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳು ಒಂದೇ ಇಟ್ಟಿಗೆ ಗೂಡಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪೊಲೀಸರು ಈಗ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದಾರೆ.