ನಾಗಪಟ್ಟಣಂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಕಾನ್ಸ್ಟೆಬಲ್ ಶವ ಪತ್ತೆ – ಆತ್ಮಹತ್ಯೆಯೋ, ದುಷ್ಕೃತ್ಯವೋ?

ನಾಗಪಟ್ಟಣಂ: ನಾಗಪಟ್ಟಣಂ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಹಿಳಾ ಕಾನ್ಸ್ಟೆಬಲ್ ಶವ ಪತ್ತೆಯಾಗಿದೆ. 29 ವರ್ಷದ ಮಹಿಳಾ ಕಾನ್ಸ್ಟೆಬಲ್ ಕುತ್ತಿಗೆಯಲ್ಲಿ ಗುಂಡೇಟಿನ ಗುರುತಿತ್ತು. ಮೃತರನ್ನು ಮೈಲಾಡುತುರೈ ಜಿಲ್ಲೆಯ ಮನಕುಡಿ ನಿವಾಸಿ ಅಭಿನಯ ಎಂದು ಅಧಿಕಾರಿಗಳು ಗುರುತಿಸಿದ್ದು, ಅವರು ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಅಭಿನಯ ಅವರನ್ನು ಸಶಸ್ತ್ರ ಕಾವಲುಗಾರರಾಗಿ ನೇಮಿಸಲಾಗಿತ್ತು ಮತ್ತು ಶನಿವಾರ ಕಲೆಕ್ಟರೇಟ್ನಲ್ಲಿ ರಾತ್ರಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು, ಜೊತೆಗೆ ಮತ್ತೊಬ್ಬ ಮಹಿಳಾ ಕಾನ್ಸ್ಟೆಬಲ್ ಕೂಡ ಇದ್ದರು.
ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕಚೇರಿಯ ಆವರಣದಲ್ಲಿ ಗುಂಡು ಹಾರಿರುವ ಶಬ್ದ ಕೇಳಿಬಂದಿತ್ತು ಎಂದು ವರದಿಯಾಗಿದೆ. ಕರ್ತವ್ಯದಲ್ಲಿದ್ದ ಮತ್ತೊಬ್ಬ ಕಾನ್ಸ್ಟೆಬಲ್ ಸ್ಥಳಕ್ಕೆ ಧಾವಿಸಿ ನೋಡಿದಾಗ ಅಭಿನಯಾ ನೆಲದ ಮೇಲೆ ಬಿದ್ದಿದ್ದು, ಅವರ ಕುತ್ತಿಗೆಯ ಎಡಭಾಗಕ್ಕೆ ಗುಂಡೇಟಿನಿಂದ ರಕ್ತಸ್ರಾವವಾಗುತ್ತಿತ್ತು.
ಸಶಸ್ತ್ರ ಮೀಸಲು ಪೊಲೀಸ್ ಉಪ ವರಿಷ್ಠಾಧಿಕಾರಿ ಮತ್ತು ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ಆರಂಭಿಸಿದರು. ಅಭಿನಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗಪಟ್ಟಣಂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆ ನಡೆದ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ. ಗುಂಡಿನ ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ, ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಫೆಬ್ರವರಿಯಲ್ಲಿ, ಶಿವಗಂಗಾ ಜಿಲ್ಲೆಯ ಮಹಿಳಾ ಸಬ್-ಇನ್ಸ್ಪೆಕ್ಟರ್ ಮೇಲೆ ರಾಜಕೀಯ ಪಕ್ಷದ ಮುಖಂಡರು ಮತ್ತು ಅವರ ಸಹಚರರು ಪೊಲೀಸ್ ಠಾಣೆಯೊಳಗೆ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಅದೇ ತಿಂಗಳು, ಚೆನ್ನೈನಲ್ಲಿ 25 ವರ್ಷದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ರೈಲ್ವೆ ನಿಲ್ದಾಣದ ಬಳಿ ಹಲ್ಲೆ ನಡೆಸಿ ಅವರ ಚಿನ್ನದ ಸರವನ್ನು ದೋಚಿದ್ದರು. ಆದರೆ ಸ್ಥಳೀಯರು ಹಿಡಿದು ಥಳಿಸಿದ್ದರು.
ಸೆಪ್ಟೆಂಬರ್ 2024 ರಲ್ಲಿ, ವಿರುಧುನಗರ ಜಿಲ್ಲೆಯಲ್ಲಿ ಕಾನೂನು ಜಾರಿ ಅಧಿಕಾರಿಗಳೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ನಡೆಸಿ ಅವರ ಕೂದಲು ಎಳೆದಾಡಿದ್ದ ವಿಡಿಯೋ ವೈರಲ್ ಆಗಿತ್ತು.