ಹವಾಮಾನ ಬಿಕ್ಕಟ್ಟಿಗೆ ಬಂಗಾಳ ಕೊಲ್ಲಿಯ ಜೀವಜಾಲ ಬಲಿಯಾಗುತ್ತದೆಯಾ?

ಭಾರತದ ಬೇಸಿಗೆಯ ಮಾನ್ಸೂನ್ನಲ್ಲಿ ಉಂಟಾಗುವ ತೀವ್ರ ಹವಾಮಾನ ಬದಲಾವಣೆಯಂತಹ ಘಟನೆಗಳು ಭವಿಷ್ಯದಲ್ಲಿ ಬಂಗಾಳಕೊಲ್ಲಿಯ ಸಮುದ್ರ ಉತ್ಪಾದಕತೆಯನ್ನು ಶಾಶ್ವತವಾಗಿ ಅಡ್ಡಿಪಡಿಸಬಹುದು ಮತ್ತು ಲಕ್ಷಾಂತರ ಜನರ ಆಹಾರ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ನೇಚರ್ ಜಿಯೋಸೈನ್ಸ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ರಟ್ಜರ್ಸ್ ವಿಶ್ವವಿದ್ಯಾಲಯ, ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಅಂತಾರಾಷ್ಟ್ರೀಯ ಸಹಯೋಗಿಗಳ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಸುಮಾರು 22,000 ವರ್ಷಗಳ ಮಾನ್ಸೂನ್ ಮತ್ತು ಸಾಗರ ದತ್ತಾಂಶದ ವಿಶ್ಲೇಷಣೆ ಮಾಡಲಾಗಿದ್ದು, ತೀವ್ರ ಮಳೆ ಅಥವಾ ಬರಗಾಲದ ಅವಧಿಯಲ್ಲಿ ಸಾಗರ ಮೇಲ್ಮೈ ಆಹಾರ ಲಭ್ಯತೆಯಲ್ಲಿ 50% ಇಳಿಕೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜಾಗತಿಕ ತಾಪಮಾನ ಏರಿಕೆಯು ಮಾನ್ಸೂನ್ ವ್ಯತ್ಯಾಸವನ್ನು ತೀವ್ರಗೊಳಿಸುವುದರಿಂದ ಇದು ಸಂಭವಿಸುವ ಸಾಧ್ಯತೆ ಇದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಅಂದಹಾಗೆ, ಜಾಗತಿಕ ಸಮುದ್ರದ ಶೇ. 1 ಕ್ಕಿಂತ ಕಡಿಮೆ ಭಾಗವನ್ನು ಒಳಗೊಂಡಿರುವ ಬಂಗಾಳಕೊಲ್ಲಿಯು, ಕರಾವಳಿ ಸಮುದಾಯಗಳಿಗೆ ಪ್ರಧಾನ ಆಹಾರವಾದ ಹಿಲ್ಸಾದಂತಹ ನಿರ್ಣಾಯಕ ಮೀನಿನ ಪ್ರಭೇದಗಳನ್ನು ಒಳಗೊಂಡಿದೆ. ಅಲ್ಲದೆ, ಇದು ವಿಶ್ವದ ಮೀನುಗಾರಿಕೆ ಉತ್ಪಾದನೆಯ ಸುಮಾರು 8% ಅನ್ನು ಪೂರೈಸುತ್ತದೆ. ಆದರೆ, ಹವಾಮಾನ ಬದಲಾವಣೆ ಮೀನುಗಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಪರಿಸರ ಪರಿಸ್ಥಿತಿಗಳನ್ನು ದಾಖಲಿಸುವ ಫೋರಾಮಿನಿಫೆರಾ-ಮೈಕ್ರೋಸ್ಕೋಪಿಕ್ ಪ್ಲಾಂಕ್ಟನ್ನ ಪಳೆಯುಳಿಕೆಗೊಂಡ ಚಿಪ್ಪುಗಳನ್ನು ಅಧ್ಯಯನ ಮಾಡುವ ಮೂಲಕ ಸಂಶೋಧನಾ ತಂಡವು ಐತಿಹಾಸಿಕ ಮಾನ್ಸೂನ್ ಪರಿಣಾಮಗಳನ್ನು ಮರುರಚಿಸಿದೆ. ಈ ಮುನ್ಸೂಚನೆಯ ಪ್ರಕಾರ ಭವಿಷ್ಯದಲ್ಲಿ ಮೀನಿನ ಪ್ರಭೇದಗಳು ಅಪಾಯದಲ್ಲಿವೆ ಎಂದು ತಿಳಿದುಬಂದಿದೆ.
ಅಸಹಜವಾಗಿ ಬಲವಾದ ಮತ್ತು ದುರ್ಬಲವಾದ ಮಾನ್ಸೂನ್ ಮಾರುತಗಳು ಸಾಗರ ಮಿಶ್ರಣವನ್ನು ಹತ್ತಿಕ್ಕಲಿದ್ದು, ಆಳವಾದ ನೀರಿನಿಂದ ಮೇಲ್ಮೈ ಪ್ಲ್ಯಾಂಕ್ಟನ್ಗೆ ಪೋಷಕಾಂಶಗಳ ಹರಿವನ್ನು ತಡೆಯುತ್ತವೆ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಅಂದಹಾಗೆ, ಪ್ಲಾಂಕ್ಟನ್ಗಳು ಸಮುದ್ರದಲ್ಲಿ ತೇಲುತ್ತಿರುವ ಮತ್ತು ಬಲವಾದ ಪ್ರವಾಹಗಳ ವಿರುದ್ಧ ಈಜಲು ಸಾಧ್ಯವಾಗದ ಸೂಕ್ಷ್ಮ ಅಥವಾ ಸಣ್ಣ ಜೀವಿಗಳಾಗಿವೆ. ಅವು ಸಮುದ್ರ ಪರಿಸರ ವ್ಯವಸ್ಥೆಗೆ ನಿರ್ಣಾಯಕವಾಗಿವೆ, ಆಹಾರ ಜಾಲಕ್ಕೆ ಆಧಾರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಭೂಮಿಯ ಆಮ್ಲಜನಕದ ಗಮನಾರ್ಹ ಭಾಗವನ್ನು ಪ್ಲ್ಯಾಂಕ್ಟನ್ ಉತ್ಪಾದಿಸುತ್ತವೆ.
ಹೆನ್ರಿಚ್ ಸ್ಟೇಡಿಯಲ್ 1 (17,500-15,500 ವರ್ಷಗಳ ಹಿಂದೆ) ಸಮಯದಲ್ಲಿ ದುರ್ಬಲ ಮಾನ್ಸೂನ್ ಗಾಳಿಗಳು ಪೋಷಕಾಂಶಗಳ ಪರಿಚಲನೆಯನ್ನು ಕಡಿಮೆ ಮಾಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಹೊಲೊಸೀನ್ ಯುಗದ ಆರಂಭದಲ್ಲಿ (10,500-9,500 ವರ್ಷಗಳ ಹಿಂದೆ) ಭಾರೀ ಮಳೆಯು ಸಮುದ್ರದ ಮೇಲ್ಮೈಯಲ್ಲಿ ಸಿಹಿನೀರಿನ ‘ಕ್ಯಾಪ್’ ಅನ್ನು ಸೃಷ್ಟಿಸಿ, ಪೋಷಕಾಂಶಗಳ ಪ್ಲಾಂಕ್ಟನ್ ಹಸಿವಿನಿಂದ ಬಳಲುವಂತೆ ಮಾಡಿತ್ತು. ಈ ಎರಡೂ ವಿಪರೀತಗಳು ಸಮುದ್ರ ಉತ್ಪಾದಕತೆಯಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿತ್ತು. ಹವಾಮಾನ ಮಾದರಿಗಳು, ಬೆಚ್ಚಗಿನ ಮೇಲ್ಮೈ ನೀರು ಮತ್ತು ತೀವ್ರಗೊಂಡ ಮಾನ್ಸೂನ್ ವ್ಯತ್ಯಾಸವನ್ನು ಊಹಿಸುವುದರಿಂದ ಇದೀಗ ಅದೇ ಸನ್ನಿವೇಶವು ಮರುಕಳಿಸುವ ನಿರೀಕ್ಷೆಯಿದೆ.
150 ಮಿಲಿಯನ್ಗಿಂತಲೂ ಹೆಚ್ಚು ಜನರು ಪ್ರೋಟೀನ್ ಮತ್ತು ಜೀವನೋಪಾಯಕ್ಕಾಗಿ ಬಂಗಾಳ ಕೊಲ್ಲಿಯ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ಲ್ಯಾಂಕ್ಟನ್ ಬೆಳವಣಿಗೆಯನ್ನು ಬೆಂಬಲಿಸುವ ಸಾಗರದ ಸಾಮರ್ಥ್ಯವು ಸಮುದ್ರ ಆಹಾರ ಜಾಲದ ಅಡಿಪಾಯವಾಗಿದೆ. ಇದರ ಕುಸಿತವು ಮೀನುಗಳ ಸಂತತಿಯನ್ನು ಕಡಿಮೆ ಮಾಡುತ್ತದೆ ಎಂದು ರಟ್ಜರ್ಸ್ ಹವಾಮಾನ ವಿಜ್ಞಾನಿ ಮತ್ತು ಅಧ್ಯಯನದ ಸಹ-ಲೇಖಕ ಯೈರ್ ರೊಸೆಂತಾಲ್ ಹೇಳಿದ್ದಾರೆ.
ಆಧುನಿಕ ಸಾಗರ ದತ್ತಾಂಶ ಮತ್ತು ಹವಾಮಾನ ಮಾದರಿಗಳು ಹಿಂದಿನ ಕುಸಿತಗಳೊಂದಿಗೆ ಹೊಂದಿಕೆಯಾಗುತ್ತವೆ. ಬಲವಾದ ಮಾನ್ಸೂನ್ಗಳು ಸಿಹಿನೀರಿನ ಹರಿವನ್ನು ಹೆಚ್ಚಿಸಿದರೆ, ದುರ್ಬಲ ಮಾನ್ಸೂನ್ ಶ್ರೇಣೀಕರಣವನ್ನು ಎದುರಿಸಲು ವಿಫಲಗೊಳ್ಳುತ್ತದೆ. ಈ ಎರಡೂ ವಿಪರೀತಗಳು ಸಮುದ್ರ ಸಂಪನ್ಮೂಲ ಲಭ್ಯತೆಗೆ ಬೆದರಿಕೆ ಹಾಕುತ್ತವೆ ಎಂದು ಅಧ್ಯಯನದ ಪ್ರಮುಖ ಲೇಖಕ ಕೌಸ್ತುಭ್ ತಿರುಮಲೈ ಒತ್ತಿ ಹೇಳಿದರು. ಇದರಿಂದ ಪ್ರಾದೇಶಿಕ ಪ್ರೋಟೀನ್ ಅಗತ್ಯಗಳಿಗೆ ಪ್ರಮುಖವಾದ ಹಿಲ್ಸಾ ಮೀನುಗಾರಿಕೆ ಉತ್ಪಾದಕತೆ ಕುಸಿಯಬಹುದು ಎಂದಿದ್ದಾರೆ.
ಹವಾಮಾನ ಮಾದರಿಗಳನ್ನು ಪರಿಷ್ಕರಿಸುವ ಮತ್ತು ಸುಸ್ಥಿರ ಮೀನುಗಾರಿಕೆ ನೀತಿಗಳನ್ನು ಅನುಷ್ಠಾನಗೊಳಿಸುವ ತುರ್ತುಸ್ಥಿತಿಯನ್ನು ಈ ಹೊಸ ಅಧ್ಯಯನ ಒತ್ತಿ ಹೇಳುತ್ತದೆ. ಅಧ್ಯಯನದ ಈ ಒಳನೋಟಗಳು ಹವಾಮಾನದ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ. ಬಂಗಾಳ ಕೊಲ್ಲಿಯ ಪರಿಸರ ವ್ಯವಸ್ಥೆಗಳು ನಿರ್ಣಾಯಕ ಹಂತದಲ್ಲಿರುವುದರಿಂದ, ಅತಿಯಾದ ಮೀನುಗಾರಿಕೆಯನ್ನು ತಗ್ಗಿಸುವುದು ಮತ್ತು ಹಸಿರುಮನೆ ಹೊರಸೂಸುವಿಕೆಯನ್ನು ನಿಗ್ರಹಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಜೀವಸೆಲೆಯನ್ನು ರಕ್ಷಿಸಲು ನಿರ್ಣಾಯಕವಾಗಿದೆ. ಈ ಸಂಶೋಧನೆಗಳು ಒಂದು ಕಟು ವಾಸ್ತವವನ್ನು ಎತ್ತಿ ತೋರಿಸಿದ್ದು, ಜಾಗತಿಕ ಆಹಾರ ಮೂಲವಾಗಿ ಬಂಗಾಳಕೊಲ್ಲಿಯ ಪಾತ್ರವು ಸಮತೋಲನದಲ್ಲಿ ತೂಗಾಡುತ್ತಿದ್ದು, ಹವಾಮಾನ-ಚಾಲಿತ ಬಿಕ್ಕಟ್ಟನ್ನು ತಪ್ಪಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದೆ.