ಭಾರತ-ಚೀನಾ ಸಂಬಂಧ ಪುನರುಜ್ಜೀವನವಾಗುತ್ತಾ? ವಿದೇಶಾಂಗ ಸಚಿವರಿಂದ ಹೊಸ ಸೂಚನೆ

ಬೀಜಿಂಗ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾ(China)ಗೆ ಭೇಟಿ ನೀಡಿದ್ದಾರೆ. ಅವರು ಮಂಗಳವಾರ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಪೂರ್ವ ಲಡಾಖ್ನಲ್ಲಿ ಗಡಿ ವಿವಾದದ ನಂತರ ಉಭಯ ದೇಶಗಳ ನಡುವಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಪ್ರಯತ್ನದ ಭಾಗವಾಗಿ ಈ ಸಭೆ ನಡೆದಿದೆ. ಶಾಂಘೈ ಸಹಕಾರ ಸಂಸ್ಥೆಯ (SCO) ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಚೀನಾಕ್ಕೆ ಹೋಗಿದ್ದರು. ಈ ಸಮಯದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಷಿ ಜಿನ್ಪಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಜೈಶಂಕರ್ ಹೇಳಿದರು.

ಭಾರತದ ರಾಯಭಾರ ಕಚೇರಿ (ಬೀಜಿಂಗ್, ಚೀನಾ) ಸಭೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ, ಇಬ್ಬರೂ ಕೈಕುಲುಕುವುದನ್ನು ಕಾಣಬಹುದು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ನಂತರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಈಗ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಎಸ್ ಜೈಶಂಕರ್ ಅವರು ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಅವರಿಗೆ ತಲುಪಿಸಿದ್ದಾರೆ.
ಇದು ಭಾರತ-ಚೀನಾ ಸಂಬಂಧಗಳನ್ನು ಸುಧಾರಿಸಲು ಮತ್ತು ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. 2020 ರಲ್ಲಿ ಗಾಲ್ವಾನ್ ಹಿಂಸಾಚಾರದ ನಂತರ ಜೈಶಂಕರ್ ಅವರ ಮೊದಲ ಚೀನಾ ಭೇಟಿ ಇದಾಗಿದೆ. ಇದು ಚೀನಾ ಮತ್ತು ಭಾರತದ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಇದಕ್ಕೂ ಮೊದಲು, ರಾಜನಾಥ್ ಸಿಂಗ್ ಎಸ್ಸಿಒ ರಕ್ಷಣಾ ಸಚಿವರ ಸಭೆಗಾಗಿ ಚೀನಾಕ್ಕೆ ಹೋಗಿದ್ದರು.
ಇದು ಬಹುಶಃ ಎಸ್ ಜೈಶಂಕರ್ ಮತ್ತು ಷಿ ಜಿನ್ಪಿಂಗ್ ಅವರ ಮೊದಲ ಭೇಟಿಯಾಗಿರಬಹುದು. ಇಲ್ಲಿಯವರೆಗೆ ಷಿ ಜಿನ್ಪಿಂಗ್ ಮತ್ತು ಜೈಶಂಕರ್ ಪರಸ್ಪರ ಭೇಟಿಯಾಗಿರಲಿಲ್ಲ.
ಮೂಲಗಳ ಪ್ರಕಾರ, ಭಾರತ ಮತ್ತು ಚೀನಾ ನಡುವಿನ ಮುಕ್ತ ಸಂವಾದದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಗಾಲ್ವಾನ್ ಹಿಂಸಾಚಾರದ ನಂತರ, ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹಳಸಿತ್ತು. ಆದರೆ ಕಳೆದ ವರ್ಷ ಕಜಾನ್ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಭೇಟಿಯ ನಂತರ, ಸಂಬಂಧ ಉತ್ತಮವಾಗಿದೆ. ಎರಡೂ ದೇಶಗಳ ಹೆಜ್ಜೆಗಳು ಈಗ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ. ಜೈಶಂಕರ್ ಅವರ ಈ ಭೇಟಿಯು ಪರಸ್ಪರ ನಂಬಿಕೆಯನ್ನು ಪುನಃಸ್ಥಾಪಿಸಲು ಮತ್ತು ಗಡಿ ವಿವಾದವನ್ನು ಪರಿಹರಿಸಲು ಎರಡೂ ದೇಶಗಳಿಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ಒಪ್ಪಂದದ ನಂತರ, ಭಾರತ ಮತ್ತು ಚೀನಾ ಪರಸ್ಪರ ಸಂವಾದದ ಮಾರ್ಗಗಳನ್ನು ಮತ್ತೆ ತೆರೆಯಲು ನಿರ್ಧರಿಸಿವೆ. ಗಾಲ್ವಾನ್ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ಮಾತುಕತೆ ಸ್ಥಗಿತಗೊಂಡಿತ್ತು. ಕಳೆದ ಒಂಬತ್ತು ತಿಂಗಳಲ್ಲಿ, ನಮ್ಮ ಸಂಬಂಧಗಳನ್ನು ಸಾಮಾನ್ಯಗೊಳಿಸುವಲ್ಲಿ ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ.
ಈಗ ನಾವು ಗಡಿಗೆ ಸಂಬಂಧಿಸಿದ ಇತರ ಅಂಶಗಳತ್ತ ಗಮನಹರಿಸಬೇಕು, ವಿಶೇಷವಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು ಎಂದು ಜೈಶಂಕರ್ ಹೇಳಿದರು. ಭಿನ್ನಾಭಿಪ್ರಾಯಗಳು ವಿವಾದದ ರೂಪ ಪಡೆಯಲು ಮತ್ತು ಸ್ಪರ್ಧೆಯು ಸಂಘರ್ಷಕ್ಕೆ ತಿರುಗಲು ಬಿಡಬಾರದು.
ಸಂಬಂಧಗಳನ್ನು ಸಂಪೂರ್ಣವಾಗಿ ಸಾಮಾನ್ಯಗೊಳಿಸುವಲ್ಲಿ ಇನ್ನೂ ಕೆಲವು ಅಡೆತಡೆಗಳಿವೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ನಡೆದುಕೊಂಡ ರೀತಿ, ದಲೈ ಲಾಮಾ ಅವರ ಉತ್ತರಾಧಿಕಾರದ ವಿಷಯ ಮತ್ತು ಪಾಕಿಸ್ತಾನಕ್ಕೆ ಚೀನಾ ನೀಡಿದ ಬೆಂಬಲ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
