ಗಂಡ ಸಾಲ ತೀರಿಸಿಲ್ಲ ಎಂದು ಹೆಂಡತಿಯನ್ನೇ ಮರಕ್ಕೆ ಕಟ್ಟಿದ ದುರುಳರು

ಚಿತ್ತೂರು: ಏನೋ ಕಷ್ಟವೆಂದಾಗ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಸಾಮಾನ್ಯ. ಆದರೆ ಸಾಲ ಜೀವಕ್ಕೆ ಕುತ್ತು ತಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪತಿ ಸಾಲ ಮರುಪಾವತಿಸಲು ವಿಫಲನಾಗಿದ್ದಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾ ಎಂಬ ಮಹಿಳೆಯನ್ನು ಸಾಲಕೊಟ್ಟ ಮುನಿಕಣ್ಣಪ್ಪ ಗಮನಿಸಿದ್ದಾನೆ. ಸಿರಿಷಾ ಅವರ ಪತಿ ತಿಮ್ಮರಾಯಪ್ಪ ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂ. ಸಾಲ ಪಡೆದಿದ್ದರು.
ಸಾಲ ಮರುಪಾವತಿಸಲು ಸಾಧ್ಯವಾಗದೆ ದಂಪತಿ ತಮ್ಮ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದಿದ್ದರು. ಅಂದಿನಿಂದ ಸಿರಿಷಾ ತನ್ನ ಕುಟುಂಬವನ್ನು ಪೋಷಿಸಲು ಮತ್ತು ಸಾಲವನ್ನು ಮರುಪಾವತಿಸಲು ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಆಕೆಯನ್ನು ನೋಡಿದ ಕೂಡಲೇ ಮುನಿಕಣ್ಣಪ್ಪ ನಿಂದಿಸಿ, ಬೇವಿನ ಮರಕ್ಕೆ ಎಳೆದು ತಂದು, ಹಗ್ಗಗಳಿಂದ ಕಟ್ಟಿ, ಥಳಿಸಿದ್ದಾನೆ. ಸಾಲ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಘಟನೆಯನ್ನು ವೀಕ್ಷಿಸಿದವರು ವಿಡಿಯೋದಲ್ಲಿ ದಾಖಲಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಪ್ಪಂ ಪೊಲೀಸರು ಮುನಿಕಣ್ಣಪ್ಪನನ್ನು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆದೇಶಿಸಿದರು. ಮುಖ್ಯಮಂತ್ರಿ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದರು, ಅವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ನಾಯ್ಡು ಪೊಲೀಸರಿಗೆ ನಿರ್ದೇಶನ ನೀಡಿದರು. ಜಿಲ್ಲಾ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಅವರು ಸಲಹೆ ನೀಡಿದರು.