ಮಂಟಪದಲ್ಲೇ ಪತ್ನಿಯ ಧರ್ಮದೇಟು! ದ್ವಿತೀಯ ಮದುವೆಗೆ ಹೋಗಿದ್ದ ಗಂಡನಿಗೆ ಬಿಸಿ ಪಾಠ

ಚಿತ್ರದುರ್ಗ: ಎರಡನೇ ಮದುವೆಯಾಗುತ್ತಿದ್ದ ಪತಿಗೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. 4 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ ಎಂಬಾಕೆ, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ್ನನ್ನು ಕೈಹಿಡಿದಿದ್ದಳು.
ಹೀಗಿದ್ದೂ ಕಾರ್ತಿಕ್ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಪ್ಲಾನ್ ಮಾಡಿದ್ದ. ಮಾಹಿತಿಗಳ ಪ್ರಕಾರ, ವರದಕ್ಷಿಣೆ ಆಸೆಗೆ ಮತ್ತೊಮ್ಮೆ ಹಸೆಮಣೆ ಏರಲು ಸಿದ್ಧವಾಗಿದ್ದ ಎನ್ನಲಾಗಿದೆ. ಈ ವಿಚಾರ ಹೇಗೋ ಮೊದಲ ಪತ್ನಿಯ ಕಿವಿಗೆ ಬಿದ್ದಿದೆ. ಸುದ್ದಿ ತಿಳಿದು ಕುಟುಂಬಸ್ಥರೊಂದಿಗೆ ಮಂಟಪಕ್ಕೇ ಬಂದು ಪತ್ನಿ ಗಂಡನಿಗೆ ಧರ್ಮದೇಟು ಕೊಟ್ಟಿದ್ದಾಳೆ. ಇದರಿಂದ ಗಂಡನ ಎರಡನೇ ಮದುವೆಗೆ ಬ್ರೇಕ್ ಬಿದ್ದಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತ ಮದುವೆಗೆ ತಯಾರಾಗಿದ್ದ ವಧುವಿನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಕಾರ್ತಿಕ್ ಜತೆ ನನಗೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ವರದಕ್ಷಿಣೆಗಾಗಿ ನನಗೆ ತುಂಬಾ ಚಿತ್ರಹಿಂಸೆ ನೀಡಿದ್ದಾರೆ. ವರದಕ್ಷಿಣೆಯೂ ನೀಡಲಾಗಿದೆ. ಆದರೂ ನನ್ನ ಗಂಡ ಎರಡನೇ ಮದುವೆಗೆ ಮುಂದಾಗಿದ್ದಾನೆ ಎಂದು ಮೊದಲ ಪತ್ನಿ ತನುಜಾ ಹೇಳಿದ್ದಾರೆ.
ಮದುವೆಯಾಗಿ ಈ ರೀತಿ ಮೋಸ ಮಾಡುವವರಿಗೆ 10 ವರ್ಷ ಜೈಲಿಗೆ ಹಾಕಬೇಕು. ವರದಕ್ಷಿಣೆ ಕೂಡ ಪಡೆದಿದ್ದಾನೆ. ಅಳಿಯ ಎರಡನೇ ಮದುವೆಯಾಗುತ್ತಿದ್ದ ಎಂಬ ವಿಷಯ ತಿಳಿದು ಮದುವೆ ನಿಲ್ಲಿಸಿದ್ದೇವೆ. ನಮಗೆ ನ್ಯಾಯ ಸಿಗಬೇಕು ಎಂದು ತನುಜಾ ತಂದೆ ನಾಗರಾಜ ನಾಯ್ಕ್ ಹೇಳಿದ್ದಾರೆ.