ಕ್ಷುಲ್ಲಕ ಕಾರಣಕ್ಕೆ ಚಿಕನ್ಗೆ ವಿಷ ಮಿಶ್ರಣ ಮಾಡಿ ಪತಿಯನ್ನು ಕೊಂದ ಪತ್ನಿ

ರಾಂಚಿ:ತಿಂಗಳ ಹಿಂದೆಯಷ್ಟೇ ವಿವಾಹವಾದ 19 ವರ್ಷದ ಯುವತಿಯೊಬ್ಬಳು ತನ್ನ 22 ವರ್ಷದ ಪತಿಗೆ ಕೀಟನಾಶಕ ಲೇಪಿತ ಚಿಕನ್ ನೀಡಿ ಕೊಂದ ಆರೋಪ ಎದುರಿಸುತ್ತಿದ್ದಾಳೆ. ಜಾರ್ಖಂಡ್ ನ ಗರ್ಹ್ವಾ ಜಿಲ್ಲೆಯ ಬಹೋಕುದಾರ್ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಛತ್ತೀಸ್ಗಢದ ಸುನೀತಾ ಸಿಂಗ್ (19) ಎಂಬಾಕೆಯ ವಿವಾಹವು ಬುಧನಾಥ್ ಸಿಂಗ್ (22) ಜತೆ ಮೇ 11ರಂದು ನಡೆದಿತ್ತು.

ಪತಿ- ಪತ್ನಿ ಸಾಮರಸ್ಯದಿಂದ ಬಾಳುವಂತೆ ಎರಡೂ ಕುಟುಂಬಗಳು ಬುದ್ಧಿವಾದ ಹೇಳಿದರೂ, ಪತಿಯನ್ನು ಇಷ್ಟವಿಲ್ಲ ಎಂಬ ಕಾರಣಕ್ಕೆ ಸುನೀತಾ, ಪತಿಗೆ ವಿಷಬೆರೆಸಿದ ಆಹಾರ ನೀಡಿ ಕೊಂದಿದ್ದಾಗಿ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಎರಡು ಬಾರಿ ವಿಷಪ್ರಾಶನ ಪ್ರಯತ್ನ ಮಾಡಿದ್ದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಸುನೀತಾ ಮಾಡಿದ್ದ ಅಡುಗೆಯನ್ನು ಉಣ್ಣಲು ಬುಧನಾಥ್ ನಿರಾಕರಿಸಿದ್ದರಿಂದ ಉಳಿದುಕೊಂಡಿದ್ದ ಎಂದು ತಾಯಿ ಹೇಳಿದ್ದಾರೆ.

ಭಾನುವಾರ ಚಿಕನ್ ಸಿದ್ಧಪಡಿಸಿದ್ದ ಸುನೀತಾ ರಹಸ್ಯವಾಗಿ ಅದಕ್ಕೆ ಕೀಟನಾಶಕ ಲೇಪಿಸಿದ್ದಳು. ಅದನ್ನು ಸೇವಿಸಿದ್ದ ಚಿಕನ್ ಪ್ರಿಯನಾಗಿದ್ದ ಬುಧನಾಥ್ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದ. ಈ ಸಾವಿನಲ್ಲಿ ಪತ್ನಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಡಿಎಸ್ಪಿ ರೋಹಿತ್ ರಂಜನ್ ಸಿಂಗ್ ಹೇಳಿದ್ದಾರೆ. ಪತ್ನಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.