ಮೊಬೈಲ್ ಚಾಟ್ ಬಗ್ಗೆ ಬುದ್ದಿವಾದ ಹೇಳಿದ ಪತಿಗೆ ಪತ್ನಿ ನೀಡಿದಳು ಸಾವಿನ ಅವಕಾಶ

ಮೊಬೈಲ್ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದ ಗಂಡನಿಗೇ ಪತ್ನಿಯೊಬ್ಬಳು ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಭಾನುವಾರ ನಡೆದಿದೆ. ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜಿತ್ ರಾಠೋಡ್ ಗಾಢ ನಿದ್ರೆಯಲ್ಲಿದ್ದಾಗ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ.
ಅಜಿತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದ್ದು, ಕೂಡಲೇ ಅವರನ್ನು ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜಿತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೇಜು ಸದಾ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದುದ್ದಕ್ಕೆ ಅಜಿತ್ ಬುದ್ಧಿವಾದ ಹೇಳಿದ್ದರು. ಇದು ತೇಜುಗೆ ಸಿಟ್ಟು ತಂದಿದ್ದು, ಆಕೆ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಆದರ್ಶನಗರ ಪೊಲೀಸರು ತೇಜು ರಾಠೋಡ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕೆರೆಯಲ್ಲಿ ಮುಳುಗಿ ತಂದೆ-ಮಗಳು ದಾರುಣ ಸಾವು; ಪುತ್ರಿಯನ್ನು ರಕ್ಷಿಸಲು ಹೋಗಿ ದುರಂತ
ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ತಂದೆ-ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ (Chikkaballapur News) ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಗ್ರಾಮದ ರೈತ ನಾಗೇಶ್(48) ಹಾಗೂ ಮಗಳು ಧನುಶ್ರೀ(13) ಮೃತಪಟ್ಟವರು. ಮಗಳನ್ನು ರಕ್ಷಿಸಲು ಹೋಗಿ ತಂದೆ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ನಾಗೇಶ್, ಮಗಳನ್ನು ಕರೆದುಕೊಂಡು ತೋಟಕ್ಕೆ ಹೋಗಿದ್ದರು. ಸಂಜೆ ವಾಪಸ್ ಬರುವಾಗ ದಾರಿ ಸಮೀಪವಿದ್ದ ಕೆರೆಯಲ್ಲಿ ಕೈ ಕಾಲು ತೊಳೆಯಲು ಧನುಶ್ರೀ ನೀರಿಗೆ ಇಳಿದಿದ್ದು, ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ನೀರಿಗೆ ಇಳಿದ ತಂದೆ ಕೂಡ ಆಯತಪ್ಪಿ ಮಗಳೊಂದಿಗೆ ನೀರು ಪಾಲಾಗಿದ್ದಾರೆ.
ಮೃತ ನಾಗೇಶ್ನ ಪುತ್ರ ನೀಡಿದ ದೂರಿನಂತೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದು ಶಾಸಕ ಬಿ.ಎನ್.ರವಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.