ಪಾಕಿಸ್ತಾನ ಸುದ್ದಿ ಮಾಧ್ಯಮ ಸಿದ್ದರಾಮಯ್ಯರನ್ನು ಹೊಗಳಿದ್ದೇಕೆ?

ಪಾಕಿಸ್ತಾನ:ಪಹಲ್ಗಾಮ್ ದಾಳಿ ಬೆನ್ನಲ್ಲೇ ಉಂಟಾಗಿರುವ ಭಾರತ ಹಾಗೂ ಪಾಕ್ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ. ಎರಡೂ ದೇಶಗಳ ರಾಜಕಾರಣಿಗಳು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಿನ್ನೆ ( ಏಪ್ರಿಲ್ 26 ) ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ ಪಾಕ್ ಹಾಗೂ ಭಾರತದ ನಡುವೆ ಯುದ್ಧ ನಡೆಯಲಿದೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದರು.
ʼಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾದಂತಹ ಅಗತ್ಯ ಇಲ್ಲ. ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಅಷ್ಟೆ. ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡುವಂತಹ ಕೆಲಸವನ್ನು ಮಾಡಬೇಕು. ಯುದ್ಧದ ಪರ ಇಲ್ಲ ನಾವು. ಶಾಂತಿ ಇರಬೇಕು, ಜನರಿಗೆ ಭದ್ರತೆ ಇರಬೇಕು, ಕೇಂದ್ರ ಸರ್ಕಾರ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಈ ಹೇಳಿಕೆ ರಾಜ್ಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು ಹಾಗೂ ಇದೀಗ ಪಾಕಿಸ್ತಾನಕ್ಕೂ ಸಹ ತಲುಪಿದೆ. ಅಲ್ಲಿನ ಸುದ್ದಿ ವಾಹಿನಿಗಳು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದು, ಸಿದ್ದರಾಮಯ್ಯನವರ ಭಾರತದ ಯುದ್ಧ ಮಾಡುವ ಅಗತ್ಯವಿಲ್ಲ, ಬದಲಾಗಿ ಭದ್ರತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಸರಿ ಇದೆ ಹಾಗೂ ಪ್ರಬುದ್ಧವಾದ ಹೇಳಿಕೆ ಎಂದು ಸಿದ್ದರಾಮಯ್ಯನವರನ್ನು ಹೊಗಳಿವೆ.
ಇನ್ನು ಪಾಕಿಸ್ತಾನದ ಸುದ್ದಿ ವಾಹಿನಿಗಳಲ್ಲಿ ಸಿದ್ದರಾಮಯ್ಯನವರ ಸುದ್ದಿ ಪ್ರಸಾರವಾಗಿರುವ ವಿಡಿಯೊ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಕಿಡಿಕಾರಿದ್ದಾರೆ.