ಆರತಿ ತಟ್ಟೆ ಹಣ ಯಾರದು? ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಾಬಾ ವಿರುದ್ಧದ ಹುಂಡಿ ವಿವಾದ

ಕೊಪ್ಪಳ: ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಹಾಗೂ ಹುಂಡಿಯ ಕಾಣಕೆ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.ಈ ಹಿಂದೆ ಸ್ಥಳೀಯ ಟ್ರಸ್ಟ್ ನೇತೃತ್ವದಲ್ಲಿ ದೇವಸ್ಥಾನವನ್ನು ನಿರ್ವಹಿಸಲಾಗುತ್ತಿತ್ತು. ವಿದ್ಯಾದಾಸ್ ಬಾಬಾ ಪ್ರಧಾನ ಅರ್ಚಕರಾಗಿದ್ದರು.
ಆದರೆ, ಬಾಬಾ ಹಾಗೂ ಟ್ರಸ್ಟ್ನವರ ನಡುವೆ ವಿವಾದ ಸೃಷ್ಟಿಯಾಯಿತು. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ 2018, ಜ.23 ರಂದು ದೇವಸ್ಥಾನದ ಆಡಳಿತವನ್ನು ವಶಕ್ಕೆ ಪಡೆದು ಧಾರ್ಮಿಕ ದತ್ತಿ ಇಲಾಖೆಗೆ ನಿರ್ವಹಣೆ ಹೊಣೆ ವಹಿಸಿತು. ಅಂದಿನಿಂದ ಇಲಾಖೆಯವರು ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದಾರೆ.
ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ದೇವಸ್ಥಾನದ ಪೂಜೆ ವಿವಾದಕ್ಕೆ ಸಂಬಂಧಪಟ್ಟಂತೆ ವಿದ್ಯಾದಾಸ್ ಬಾಬಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪೂಜೆ ಮಾಡಲು ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಆರತಿ ತಟ್ಟೆಯ ಹಣ ತೆಗೆದುಕೊಳ್ಳುವ ವಿಚಾರವಾಗಿ ಇಲಾಖೆ ಹಾಗೂ ಬಾಬಾ ನಡುವೆ ಗಲಾಟೆ ಮುಂದುವರಿಯಿತು. 3 ವರ್ಷಗಳ ಹಿಂದೆ ಬಾಬಾ ಅವರ ವಿರುದ್ಧ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ನಂತರ ಬಾಬಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಪೂಜೆಗೆ ಅವಕಾಶ ನೀಡುವಂತೆ ಸೂಚಿಸಿದೆ.
ಬಾಬಾ ಅವರು ಜೂನ್ 2 ರಂದು ತಮ್ಮ ಬೆಂಬಲಿಗರ ಜತೆ ಗೂಡಿ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಆರಂಭಿಸಿದ್ದಾರೆ. ದೇವಸ್ಥಾನದ ಹುಂಡಿಗಳಿಗೆ ಭಕ್ತರು ಹಣ ಹಾಕದಂತೆ ಬಟ್ಟೆಯಿಂದ ಬಿಗಿಯಾಗಿ ಕಟ್ಟಲಾಗಿದೆ. ಭಕ್ತರು ಆರತಿ ತಟ್ಟೆಗೆ ಹಾಕುವ ಕಾಣಿಕೆಯನ್ನು ಬಾಬಾ ಅವರು ಸ್ವಂತಕ್ಕೆ ಬಳಸುತ್ತಿದ್ದಾರೆ. ಮಾಸಿಕ 15 ಲಕ್ಷ ರೂ. ಗಳಿಗೂ ಅಧಿಕ ಕಾಣಿಕೆ, ಹುಂಡಿಯಲ್ಲಿ ಸಂಗ್ರಹವಾಗುತ್ತದೆ. ಈ ಹಿನ್ನೆಲೆ ದೇವಸ್ಥಾನದ ನಿರ್ವಹಣೆ ಜಿಲ್ಲಾಡಳಿತಕ್ಕೆ ಹೊಸ ಸವಾಲು ಸೃಷ್ಟಿಸಿದೆ.
ವಿವರಣೆ ಇಲ್ಲದ ಗೊಂದಲ ಸೃಷ್ಟಿ
ಅಂಜನಾದ್ರಿ ದೇವಸ್ಥಾನದಲ್ಲಿ ವಿದ್ಯಾ ದಾಸ ಬಾಬಾ ಅವರು ಆರತಿ ತಟ್ಟೆಯಲ್ಲಿ ಹಣ ತೆಗೆದುಕೊಳ್ಳುವ ವಿಚಾರ ಗಮನಕ್ಕೆ ಬಂದಿದೆ. ಕಾಯಿದೆಯಲ್ಲಿ ಸ್ವಷ್ಟವಾದ ವಿವರಣೆ ಇಲ್ಲದೆ ಇರುವ ಕಾರಣಕ್ಕೆ ಗೊಂದಲ ಸೃಷ್ಟಿಯಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಂಜನಾದ್ರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.