“ಅಪಘಾತದ ಹೊಣೆ ಯಾರದ್ದು?” ಹೈಕೋರ್ಟ್ ತೀರ್ಪು ಹೊಸ ಚರ್ಚೆಗೆ ಕಾರಣ!

ಬೆಂಗಳೂರು: ಏಳು ವರ್ಷಗಳ ಹಿಂದೆ ಬೆಂಗಳೂರಿನ ನೈಸ್ ರಸ್ತೆ ಬಳಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಮೋಟರ್ ಬೈಕ್ ಸವಾರನ ಸಾವಿಗೆ ಕಾರಣನಾದ ವ್ಯಕ್ತಿಯ ವಿರುದ್ಧದ ಆರೋಪವನ್ನು ಹೈಕೋರ್ಟ್ ಕೈಬಿಟ್ಟಿದೆ.ಅಲ್ಲದೆ, ದುಡುಕಿನ ವರ್ತನೆ ಮತ್ತು ನಿರ್ಲಕ್ಷ್ಯವನ್ನು ಪ್ರತಿಯೊಂದು ಪ್ರಕರಣದಲ್ಲಿವಾಸ್ತವಿಕ ಅಂಶಗಳ ಮೇಲೆ ನಿರ್ಣಯಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯ ತಮಗೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ತುಮಕೂರಿನ ಜಯನಗರದ ಹರೀಶ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ವಾದ – ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಭಾರತೀಯ ದಂಡ ಸಂಹಿತೆ ಸೆಕ್ಷನ್ 279 ಹಾಗೂ 304 (ಎ) ಅಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯಿಂದ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗುತ್ತಿದೆ ಎಂದು ಆದೇಶ ನೀಡಿದೆ. (ಅಪಘಾತ ಪರಿಹಾರ ಹೆಚ್ಚಿಸಿದ ಹೈಕೋರ್ಟ್)
ಆರೋಪ ಖುಲಾಸೆಗೆ ಕಾರಣ ಕೊಟ್ಟ ನ್ಯಾಯಾಲಯ
”ಮೃತ ವ್ಯಕ್ತಿಯು ಮೋಟರ್ ಸೈಕಲ್ ಸವಾರಿ ಮಾಡುವಾಗ ಮದ್ಯದ ಅಮಲಿನಲ್ಲಿದ್ದನು. ಆರೋಪಿಯು ತನ್ನ ವಾಹನವನ್ನು ಸರಿಯಾದ ದಿಕ್ಕಿನಲ್ಲಿ ಅಂದರೆ ರಸ್ತೆಯ ಎಡಭಾಗದಲ್ಲಿ ಚಲಾಯಿಸುತ್ತಿದ್ದರಿಂದ ಆತ ತನ್ನ ಮುಂದೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತಾನೆ ಎಂದು ಊಹಿಸಲು ಕಾರು ಚಾಲಕನಿಗೆ ಸಾಧ್ಯವಾಗಲಿಲ್ಲವಾದ್ದರಿಂದ ‘ಮುನ್ಸೂಚನೆ ಮತ್ತು ಸಾಮೀಪ್ಯದ ತತ್ವ’ ಅನ್ವಯಿಸುವ ಮೂಲಕ ಆರೋಪಿಯ ನಿರ್ಲಕ್ಷ್ಯದ ಮಟ್ಟ ನಿರ್ಧರಿಸಲಾಗುವುದಿಲ್ಲ ‘ ಎಂದು ನ್ಯಾಯಾಲಯ ಹೇಳಿದೆ.
ಮೃತರು ಮದ್ಯ ಸೇವಿಸಿದ ಮತ್ತಿನಲ್ಲಿದ್ದರು
ಮೃತರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೊಟ್ಟೆಯಲ್ಲಿ ಕೆಟ್ಟ ವಾಸನೆ ಇದ್ದು, ಮದ್ಯ ಸೇವನೆ ಮಾಡಿರುವ ಶಂಕೆ ಉಳಿದಿವೆ ಎಂದು ಹೇಳಲಾಗಿದೆ. ಘಟನೆಯ ಸಮಯದಲ್ಲಿ, ಮೃತರು ಮದ್ಯ ಸೇವಿಸಿದ ಮತ್ತಿನಲ್ಲಿದ್ದರು ಮತ್ತು ಮದ್ಯದ ಪ್ರಭಾವದಲ್ಲಿ ಅವರು ಮೋಟಾರ್ ಸೈಕಲ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಆರೋಪಿಯ ವಾಹನದ ಮುಂದೆ ಬಿದ್ದರು ‘ ಎಂಬ ಅರ್ಜಿದಾರರ ವಾದ ಒಪ್ಪಿದ ನ್ಯಾಯಾಲಯ, ಅದರಿಂದಾಗಿ ಅಪಘಾತ ಸಂಭವಿಸಿದೆ” ಎಂದು ಹೇಳಿದೆ. (ಕಮಲ್ ಹಾಸನ್ ಕೇಸ್ ವಿಚಾರಣೆ ನಡೆಸಿದ ಜಡ್ಜ್ ಈ ಹಿಂದೆ ನಟರು)
ವೇಗವಾಗಿ ಕಾರು ಚಾಲನೆ ಮಾಡಿದ್ದಕ್ಕೆ ಬಲವಾದ ಸಾಕ್ಷ್ಯ ಇಲ್ಲ
ಆರೋಪಿ ಕಾರನ್ನು ಅತಿವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣರಾದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಬಲವಾದ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ,” ಎಂದೂ ನ್ಯಾಯಪೀಠ ಹೇಳಿದೆ