ಪಶ್ಚಿಮ ಬಂಗಾಳ: ಭಾರತ-ಬಾಂಗ್ಲಾ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆದಾರ ಗುಂಡಿಕ್ಕಿ ಹತ್ಯೆ!

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಂಗ್ಲಾದೇಶದ, ಮಾದಕವಸ್ತುಗಳ ಕಳ್ಳಸಾಗಣೆದಾರನನ್ನು ಬಿಎಸ್ಎಫ್ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

32ನೇ ಬೆಟಾಲಿಯನ್ ವ್ಯಾಪ್ತಿಯಲ್ಲಿರುವ ಹಲ್ದೇರ್ಪಾರಾ ಗಡಿಯಲ್ಲಿ ಈ ಘಟನೆ ನಡೆದಿದೆ. ಚಿನ್ನದ ಕಳ್ಳಸಾಗಣೆ ಪ್ರಯತ್ನದ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಬಿಎಸ್ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಐವರು ಶಸ್ತ್ರಸಜ್ಜಿತ ಬಾಂಗ್ಲಾದೇಶದ ಕಳ್ಳಸಾಗಣೆದಾರರ ಗುಂಪು ನದಿ ದಾಟಿ ಭಾರತದೊಳಗೆ ಪ್ರವೇಶಿಸಲು ಮುಂದಾಗಿತ್ತು. ಜತೆಗೆ, ಬಿಎಸ್ಎಫ್ ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿತ್ತು. ಗುಂಪು ಚದುರಿಸಲು ಸಿಬ್ಬಂದಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆ ನಂತರವು ಕಳ್ಳಸಾಗಣೆದಾರರು ಬಿಎಸ್ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ರೈಫಲ್ ಕಸಿದುಕೊಳ್ಳಲು ಮುಂದಾಗಿತ್ತು. ಆಗ ಬಿಎಸ್ಎಫ್ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಕಳ್ಳ ಸಾಗಣೆದಾರನೊಬ್ಬ ಮೃತಪಟ್ಟಿದ್ದಾನೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
