ವಿಧಾನಸೌಧದ ಅನೌನ್ಸ್ಮೆಂಟ್ ದುರಂತಕ್ಕೆ ಕಾರಣವೇ? ಸರ್ಕಾರಿ ವರದಿಯಿಂದ ಶಾಕ್

ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಸತ್ತ 11 ಜನರ ಸಾವಿಗೆ ಸಂಬಂಧಿಸಿದಂತೆ ನಿತ್ಯ ಒಂದಿಲ್ಲೊಂದು ಹೊಸ ಹೊಸ ಮಾಹಿತಿಗಳು ಹೊರಗೆ ಬರುತ್ತಿವೆ. ಇದೀಗ ವಿಧಾನಸೌಧದ ಬಳಿಯ ಕಾರ್ಯಕ್ರಮದ ಲೋಪಗಳ ಬಗ್ಗೆ ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ತನಿಖೆಯ ಮೌಖಿಕ ಮಾಹಿತಿ ಸರ್ಕಾರಕ್ಕೆ ಶಾಕ್ ನೀಡಿದೆ. ವಿಧಾನಸೌಧದ ಬಳಿ ಸನ್ಮಾನ ಮಾತ್ರ, ಸ್ಟೇಡಿಯಂ ಕಡೆಗೆ ಹೋಗಿ ಎಂದು ಮೈಕ್ನಲ್ಲಿ ಅನೌನ್ಸ್ಮೆಂಟ್ ಮಾಡಿರುವುದು ಕೂಡ ದುರಂತಕ್ಕೆ ಕಾರಣವೆಂಬ ಮಾಹಿತಿ ಹೊರಬಿದ್ದಿದೆ.
ವಿಧಾನಸೌಧದಲ್ಲಿ ಸನ್ಮಾನ ಮಾತ್ರ, ಸ್ಟೇಡಿಯಂ ಕಡೆ ಹೋಗಿ, ಅಲ್ಲಿ ಸೆಲೆಬ್ರೇಶನ್ ಎಂದು ಓರ್ವ ಶಾಸಕ ಮತ್ತು ನಿರೂಪಕರಿಂದ ಮೈಕ್ನಲ್ಲಿ ಅನೌನ್ಸ್ಮೆಂಟ್ ಮಾಡಲಾಗಿದೆ. ಹೀಗಾಗಿ ವಿಧಾನಸೌಧದ ಕಡೆ ಇದ್ದವರು ಸ್ಟೇಡಿಯಂ ಕಡೆ ನುಗ್ಗಲು ಅದೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಐಪಿಎಸ್ ಅಧಿಕಾರಿ ಓರ್ವರು ಕರೆ ಮಾಡಿ ವಿಧಾನಸೌಧದ ಮುಂದಿನ ಕಾರ್ಯಕ್ರಮ ಮುಗಿಸುವವರೆಗೂ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ಓಪನ್ ಮಾಡಬಾರದು ಅಂತ ಕೆಎಸ್ಸಿಎ ಪದಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆ ಮೂಲಕ ಮುಖ್ಯಮಂತ್ರಿಯನ್ನು ಮೆಚ್ಚಿಸುವಗೋಸ್ಕರ ಈ ಸೂಚನೆ ನೀಡಿದರು ಅಂತ ಹೇಳಲಾಗುತ್ತಿದೆ.
ಸೂಚನೆ ಹಿನ್ನಲೆ ಕೇವಲ ಮೂರು ಗೇಟು ಮಾತ್ರ ಓಪನ್ ಆಗಿತ್ತು. ಉಳಿದ 18 ಗೇಟ್ಗಳು ಬಂದಾಗಿತ್ತು. ವಿಧಾನಸೌಧದ ಬಳಿ ಸಚಿವರು, ಶಾಸಕರು ಮತ್ತು ಐವಿಪಿಗಳು ಇದ್ದ ಕಾರಣ ಅತೀ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು. ಆದರೆ ಸ್ಟೇಡಿಯಂ ಬಳಿ ಬೆಳರಣಿಕೆಯಷ್ಟು ಪೊಲೀಸರ ನಿಯೋಜನೆ ಮಾಡಲಾಗಿತ್ತು ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜಧಾನಿಯಲ್ಲಿ ಸಾಲು ಸಾಲು ಪ್ರತಿಭಟನೆ
ಇನ್ನು ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತವನ್ನು ಖಂಡಿಸಿ ರಾಜ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು ಮಾಡಲಾಗುತ್ತಿದೆ. ಸರ್ಕಾರದ ಬೇಜವ್ದಾರಿ ಖಂಡಿಸಿ ಎಬಿವಿಪಿ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಮತ್ತೊಂದೆಡೆ ದಕ್ಷ ಪೊಲೀಸ್ ಅಧಿಕಾರಿಗಳ ತಲೆದಂಡ ವಿರೋಧಿಸಿ ಅಂಬೇಡ್ಕರ್ ಸೇನೆಯಿಂದ ತಮಟೆ ಚಳುವಳಿ ಮಾಡಲಾಗಿದೆ.