ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಉಲಮಾ ಮತ್ತು ಖಾಝಿಗಳ ಒತ್ತಾಯ

ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ತೀವ್ರವಾಗಿ ವಿರೋಧಿಸಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೇತೃತ್ವದಲ್ಲಿ ಖಾಝಿಗಳು ಮತ್ತು ಉಲಮಾಗಳು ಮಸೂದೆ ಹಿಂಪಡೆಯಲು ಆಗ್ರಹಿಸಿದ್ದಾರೆ. ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಪ್ರಮುಖ ಉಲಮಾಗಳು, ಈ ಮಸೂದೆ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಕುಂದುಕೊಳ್ಳುವ ಮತ್ತು ವಕ್ಫ್ ಆಸ್ತಿಗಳ ಮೇಲಿನ ನಿಯಂತ್ರಣವನ್ನು ಸಮುದಾಯದಿಂದ ಕಿತ್ತುಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ಈ ಮಸೂದೆ ಮುಸ್ಲಿಮರ ಧಾರ್ಮಿಕ ದಾನಗಳ ಮೇಲೆ ಪ್ರಭುತ್ವ ಸ್ಥಾಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಮುಸ್ಲಿಮರು ಅನಾದಿಕಾಲದಿಂದ ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗಾಗಿ ವಕ್ಫ್ ಸ್ವತ್ತುಗಳನ್ನು ಬಳಸಿ ಬಂದಿದ್ದು, ಅದನ್ನು ನಿರ್ವಹಿಸಲು ಸಮುದಾಯವೇ ಮುಂದಾಗಬೇಕೆಂಬುದು ಅವರ ಹಕ್ಕು ಎಂದು ಖಾಝಿಗಳು ಒತ್ತಿಹೇಳಿದ್ದಾರೆ.
ನೂತನ ತಿದ್ದುಪಡಿಯ ಪ್ರಕಾರ, ದಾಖಲೆ ಇಲ್ಲದ ವಕ್ಫ್ ಆಸ್ತಿಗಳನ್ನು ವಕ್ಫ್ ಸ್ವತ್ತಾಗಿ ಪರಿಗಣಿಸದೇ, ಆಸ್ತಿಗಳ ನಿಯಂತ್ರಣವನ್ನು ಸರಕಾರದ ಅಧಿಕಾರಿಗಳಿಗೆ ನೀಡುವುದರಿಂದ, ಮುಸ್ಲಿಂ ಸಮುದಾಯವು ತಮ್ಮ ಧಾರ್ಮಿಕ ಆಸ್ತಿಗಳ ಮೇಲೆ ಹಿಡಿತ ಕಳೆದುಕೊಳ್ಳಬಹುದು. ಇದಲ್ಲದೆ, ಈ ಮಸೂದೆಯಲ್ಲಿ ವಕ್ಫ್ ಟ್ರಿಬ್ಯುನಲ್ನ ನೇಮಕಾತಿ ನಿಯಮಗಳನ್ನು ಬದಲಾಯಿಸುವ ಮೂಲಕ, ಮುಸ್ಲಿಂ ಸಮುದಾಯದ ಪ್ರತಿನಿಧಿಯನ್ನು ಹೊರಗಿಡಲು ಉದ್ದೇಶಿಸಲಾಗಿದೆ ಎಂದು ಅವರು ಆರೋಪಿಸಿದರು.
ವಿರೋಧ ಪಕ್ಷಗಳ ಹಾಗೂ ಮುಸ್ಲಿಂ ಸಮುದಾಯದ ತೀವ್ರ ವಿರೋಧದ ನಡುವೆಯೂ, ಕೇಂದ್ರ ಸರಕಾರ ಈ ತಿದ್ದುಪಡಿಯನ್ನೇ ಮುಂದುವರಿಸುವ ತೀರ್ಮಾನ ತೆಗೆದುಕೊಂಡಿದ್ದು, ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಖಾಝಿಗಳು ಹೇಳಿದ್ದಾರೆ. ಈ ಕಾರಣಗಳಿಂದ, ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ರಕ್ಷಿಸಲು, ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಕೂಡಲೇ ಹಿಂಪಡೆಯಬೇಕೆಂದು ಉಲಮಾಗಳು ಒತ್ತಾಯಿಸಿದ್ದಾರೆ.