ವಿಟ್ಲ: ದಲಿತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಬಿಜೆಪಿ ಮುಖಂಡನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮಾಣಿಲ ಗ್ರಾಮದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿ ಜೆ ಪಿ ಮುಖಂಡ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹೇಶ್ ಭಟ್ ಎಂಬಾತ ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ ಹಿಂಸೆಯನ್ನು ಎಸಗಿರುತ್ತಾನೆ. ಈತನ ವರ್ತನೆ ಬಗ್ಗೆ ಸ್ಥಳೀಯರು ದಲಿತ ಹಕ್ಕುಗಳ ಸಮಿತಿಯ ಮುಖಂಡರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಡಿಎಚ್ಎಸ್ ನ ಜಿಲ್ಲಾ ಮುಖಂಡರುಗಳಾದ ಈಶ್ವರಿ ಶಂಕರ್ ಪದ್ಮುಂಜ ಹಾಗೂ ಕೃಷ್ಣ ತಣ್ಣೀರುಬಾವಿ ಸಂತ್ರಸ್ತ ದಲಿತ ವಿದ್ಯಾರ್ಥಿಯ ಸಮಸ್ಯೆಗಳಿಗೆ ಸ್ಪಂದಿಸಿರುತ್ತಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೆತ್ತವರ ಸಮ್ಮುಖದಲ್ಲಿ ಸಂತ್ರಸ್ತೆ ಬಾಲಕಿಯು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿರುತ್ತಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಸಂತ್ರಸ್ತ ಬಾಲಕಿಯ ವಿಚಾರಣೆ ನಡೆಸಿದಾಗ ಆರೋಪಿ ಮಹೇಶ್ ಭಟ್ ಗಂಭೀರ ಸ್ವರೂಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಬೀತಾಗಿದೆ. ಆದರೆ ವಿಟ್ಲ ಪೊಲೀಸರು ಈ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ತೀರಾ ನಿರ್ಲಕ್ಷವಹಿಸಿದ್ದಾರೆಂದು ಸಮಿತಿಯ ಮುಖಂಡರು ಆರೋಪಿಸಿದ್ದಾರೆ.
ಪೊಲೀಸರ ಕ್ರಮವನ್ನು ಪ್ರಶ್ನಿಸಿ ಡಿಎಚ್ಎಸ್ ಮುಖಂಡರಾದ ಈಶ್ವರಿ ಅವರು ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ್ದಾರೆ. ನೊಂದ ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಆರೋಪಿಯ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಎಸ್ಪಿಯವರು ಸೂಚನೆಯನ್ನು ನೀಡಿದ್ದಾರೆಂದು ಸಮಿತಿ ಮುಖಂಡರು ತಿಳಿಸಿದ್ದಾರೆ.
ಇದೀಗ ಆರೋಪಿ ಮಹೇಶ್ ವಿರುದ್ಧ ಪೋಕ್ಸೋ ಪ್ರಕರಣದಡಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿ ಮಹೇಶ್ ಭಟ್ ನನ್ನು ಈವರೆಗೂ ಬಂಧಿಸುವಲ್ಲಿ ವಿಟ್ಲ ಪೊಲೀಸರು ಬೇಜಾವಾಬ್ದಾರಿ ವಹಿಸಿದ್ದಾರೆಂದು ಸಮಿತಿ ಮುಖಂಡರಾದ ಈಶ್ವರಿ ಪದ್ಮುಂಜ ಆರೋಪಿಸಿದ್ದಾರೆ. ಆರೋಪಿಯು ಬಿಜೆಪಿ ಪಕ್ಷದ ಪ್ರಭಾವವನ್ನು ಬಳಸಿ ಪ್ರಕರಣದ ಧಿಕ್ಕು ತಪ್ಪಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಈ ಬಗ್ಗೆ ಜಿಲ್ಲಾ ವರಿಷ್ಟಾಧಿಕಾರಿಗಳು ಗಮನ ಹರಿಸಿ ಪ್ರಕರಣದ ತನಿಖೆಯು ಹಾದಿ ತಪ್ಪದಂತೆ ಮುತ್ತುವರ್ಜಿ ವಹಿಸಬೇಕೆಂದು, ಹಾಗೂ ಆರೋಪಿ ಮಹೇಶ್ ಭಟ್ ನನ್ನು ಕೂಡಲೇ ಬಂಧಿಸಿ ಕಠಿಣ ಪ್ರಕರಣದಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿಎಚ್ಎಸ್ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ ಎಂದು ಡಿಎಚ್ಎಸ್ ನ ಜಿಲ್ಲಾ ಮುಖಂಡರಾದ ಈಶ್ವರಿ ಪದ್ಮುಂಜ ಹಾಗೂ ಕೃಷ್ಣ ತಣ್ಣೀರುಬಾವಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.