Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಜಯಪುರ SBI ದರೋಡೆ ಪ್ರಕರಣ: 9 ಕೆ.ಜಿ. ಚಿನ್ನ, ₹86.31 ಲಕ್ಷ ನಗದು ವಶ; ಬಿಹಾರದ 3 ಪ್ರಮುಖ ಆರೋಪಿಗಳ ಬಂಧನ

Spread the love

ವಿಜಯಪುರ : ಭೀಮಾತೀರದಲ್ಲಿ ಸಂಚಲನ ಮೂಡಿಸಿದ್ದ ಚಡಚಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ 22 ವರ್ಷದೊಳಗಿನ (ಜೆನ್‌ಜೀ ಕಿಡ್ಸ್) ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ದರೋಡೆಕೋರರ ಸೆರೆ ಮತ್ತು ವಶಪಡಿಸಿಕೊಂಡ ವಸ್ತುಗಳು

ಬಂಧಿತ ಆರೋಪಿಗಳನ್ನು ಬಿಹಾರ ಮೂಲದವರಾದ ರಾಕೇಶ್‌ಕುಮಾರ್ ಸಹಾನಿ (22), ರಾಜಕುಮಾರ್ ಪಾಸ್ವಾನ್ (21), ಮತ್ತು ರಕ್ಷಕಕುಮಾರ್ ಮಾತೊ (21) ಎಂದು ಗುರುತಿಸಲಾಗಿದೆ. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 9 ಕೆ.ಜಿ. ಚಿನ್ನಾಭರಣ ಮತ್ತು ₹86.31 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್ 19 ರಂದು ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿತ್ತು. ದರೋಡೆಕೋರರು ಒಟ್ಟು 20 ಕೆ.ಜಿ. ಚಿನ್ನ ಮತ್ತು ₹1.04 ಕೋಟಿ ನಗದನ್ನು ದೋಚಿದ್ದರು. ಈ ಪ್ರಕರಣದಲ್ಲಿ ಈ ಮೊದಲು ಒಬ್ಬ ದರೋಡೆಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಈಗ ವಶಕ್ಕೆ ಪಡೆದ ಚಿನ್ನಾಭರಣ ಮತ್ತು ನಗದನ್ನು ಸೇರಿಸಿದರೆ, ಇನ್ನೂ 11 ಕೆ.ಜಿ. ಚಿನ್ನಾಭರಣ ಮತ್ತು ಸುಮಾರು ₹14 ಲಕ್ಷ ನಗದು ಪತ್ತೆ ಮಾಡುವುದು ಬಾಕಿ ಇದೆ.

ಕಂಟ್ರಿ ಪಿಸ್ತೂಲ್‌ ತಂದು ದರೋಡೆ:

ಬಂಧಿತ ಆರೋಪಿಗಳು ಕೇವಲ ದರೋಡೆಕೋರರಾಗಿರದೆ, ಈ ಪ್ರಕರಣದ ಪ್ರಮುಖ ಕೊಂಡಿಗಳಾಗಿದ್ದರು. ದರೋಡೆಗೆಂದೇ ಬಿಹಾರದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ತರಿಸಿಕೊಂಡಿದ್ದಾಗಿ ತಿಳಿದುಬಂದಿದೆ. ವಾಸ್ತವವಾಗಿ, ಗನ್ ತಂದ ಬಳಿಕವೇ ಈ ಮೂವರು ದರೋಡೆಕೋರರು ದೊಡ್ಡಮಟ್ಟದ ದರೋಡೆಗೆ ಮುಂದಾಗಿದ್ದರು. ಈ ದರೋಡೆಕೋರರು ಕಂಟ್ರಿ ಪಿಸ್ತೂಲ್‌ಗಳನ್ನು ಚಡಚಣದ ಇತರ ದರೋಡೆಕೋರರಿಗೂ ಪೂರೈಸಿದ್ದರು ಎನ್ನಲಾಗಿದೆ.

ವಾಹನದಲ್ಲಿ ಸಿಕ್ಕಿದ್ದ ಮತ್ತಷ್ಟು ಸಂಪತ್ತು

ದರೋಡೆ ನಡೆದ ದಿನ ದರೋಡೆಕೋರರು ತಾವು ಬಳಸಿದ್ದ ಮಾರುತಿ ಇಕೋ ಕಾರನ್ನು ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ಈ ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ ಸುಮಾರು 21 ಪ್ಯಾಕೇಟ್‌ಗಳಲ್ಲಿದ್ದ 888.33 ಗ್ರಾಂ ಚಿನ್ನ ಹಾಗೂ ₹1.03 ಲಕ್ಷ ನಗದು ಪತ್ತೆಯಾಗಿತ್ತು. ಅಲ್ಲದೆ, ದರೋಡೆಕೋರರು ಬಿಟ್ಟುಹೋಗಿದ್ದ ಮತ್ತೊಂದು ಬ್ಯಾಗಿನಲ್ಲಿ 6.54 ಕೆ.ಜಿ. ಚಿನ್ನ ಮತ್ತು ₹41 ಲಕ್ಷ ನಗದು ಸಿಕ್ಕಿತ್ತು.

ಈ ಮೂವರು ಆರೋಪಿಗಳ ಬಂಧನದಿಂದ ಬ್ಯಾಂಕ್ ದರೋಡೆ ಜಾಲದ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭೀಮಾತೀರದಲ್ಲಿ ನಡೆದ ಈ ದೊಡ್ಡ ದರೋಡೆ ಪ್ರಕರಣದ ಉಳಿದ ಆರೋಪಿಗಳ ಪತ್ತೆಗೆ ತೀವ್ರ ತನಿಖೆ ಮುಂದುವರೆದಿದೆ.


Spread the love
Share:

administrator

Leave a Reply

Your email address will not be published. Required fields are marked *