ನೇತ್ರಾವತಿ ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ

ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಪೇಟೆ ಮತ್ತು ಬಿ.ಸಿ.ರೋಡು ಸಂಪರ್ಕಿಸಲು ಬ್ರಿಟೀಷರ ಆಡಳಿತಾವಧಿಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಹಳೆ ಸೇತುವೆ ಮೇಲೆ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.
ಈ ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆಯಲ್ಲಿ ಕೆಲವೆಡೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಿ ಕೆಲ ವರ್ಷಗಳ ಹಿಂದೆಯೇ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಮಂಗಳವಾರ ಪಿಕಪ್ ವಾಹನವೊಂದು ಕಬ್ಬಿಣದ ಕಮಾನಿಗೆ ಸಿಲುಕಿಕೊಂಡ ಘಟನೆ ಮರುಕಳಿಸಿದ ಪರಿಣಾಮ ತಹಶೀಲ್ದಾರ್ ವಾಹನ ಸಂಚಾರ ಸ್ಥಗಿತಗೊಳಿಸಿ ಆದೇಶಿಸಿದ್ದಾರೆ.
ಈ ಸೇತುವೆಯ ಸಾಮರ್ಥ್ಯ ಕುರಿತು ಸಕ್ಷಮ ಇಲಾಖೆಯಿಂದ ವರದಿ ಬರುವವರೆಗೆ ಸೇತುವೆ ಮೇಲೆ ಸಂಚಾರ ಅಪಾಯಕಾರಿ ಎಂದು ಪರಿಗಣಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಕಟ್ಟುನಿಟ್ಟಾಗಿ ಆದೇಶ ಪಾಲಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.