ಗಗನಕ್ಕೇರಿದ ತರಕಾರಿ ಬೆಲೆ: ನುಗ್ಗೆಕಾಯಿ ₹160, ಬೀನ್ಸ್ ₹110 — ಗ್ರಾಹಕರಿಗೆ ಶಾಕ್

ಚಿಕ್ಕಬಳ್ಳಾಪುರ: ಕೆ.ಜಿ. ನುಗ್ಗೆ ಕಾಯಿ ಬರೋಬರಿ 160 ರೂ., ಬದನೆ ಕಾಯಿ 60 ರೂ., ಆಲೂಗಡ್ಡೆ, ಬೀಟ್ರೂಟ್ ಕೆ.ಜಿ.ತಲಾ 50 ರೂ, ಹಾಗಲಕಾಯಿ ಕೆ.ಜಿ.ಗೆ 60 ರೂ, ಬೀನ್ಸ್ ಕೆ.ಜಿ. 80 ರಿಂದ 110 ರೂಗೆ ಮಾರಾಟ..!
ಹೌದು, ಜಿಲ್ಲೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಳೆಗಾಲದ ಹೊಸ್ತಿಲ್ಲಲಿ ದಿನನಿತ್ಯ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿರುವ ತರಕಾರಿ ಬೆಲೆಗಳ ಬೆಲೆ ವಿಪರೀತ ಏರಿಕೆ ಕಾಣುತ್ತಿದ್ದು, ಹೋಟೆಲ್ ಮಾಲೀಕರು, ಗ್ರಾಹಕರು ತರಕಾರಿ ಬೆಲೆ ಏರಿಕೆಗೆ ಗಾಬರಿಗೊಂಡು ಕಂಗಾಲಾಗುವಂತೆ ಮಾಡಿದೆ.
ಕಳೆದೊಂದು ವಾರದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳ ಏರಿಕೆ ಆಗುತ್ತಲೇ ಇದ್ದು, ವ್ಯಾಪಾರಿಗಳ ಖರೀದಿಗೂ ತರಕಾರಿ ಸಿಗದ ಪರಿಸ್ಥಿತಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಉದ್ಬವಿಸಿದ್ದು, ಇದರ ಪರಿಣಾಮ ಬರುವ ಅಲ್ಪಸ್ವಲ್ಪ ತರಕಾರಿಯನ್ನು ದುಬಾರಿಗೆ ಖರೀದಿಸಿ ಚಿಲ್ಲರೆ ವ್ಯಾಪಾ ರಸ್ಥರು ಗ್ರಾಹಕರಿಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿರುವುದರಿಂದ ತರಕಾರಿ ಉತ್ಪಾದನೆ ಕುಸಿತ ಕಂಡಿದೆ. ಕೆಲವೊಂದು ಕಡೆ ಮುಂಗಾರು ಪೂರ್ವ ಮಳೆಯಿಂದ ತರಕಾರಿ ಬೆಳೆಗಳು ನೆಲಕಚ್ಚಿದ್ದು ಇದರಿಂದ ಅಗತ್ಯ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಕಳೆದ ಬೇಸಿಗೆಯಲ್ಲಿ ಮಾರುಕಟ್ಟೆಗೆ ಬಂದ ತರಕಾರಿಯಲ್ಲಿ ಈಗ ಕನಿಷ್ಠ ಅರ್ಧದಷ್ಟು ತರಕಾರಿ ಬರುತ್ತಿಲ್ಲ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್, ನುಗ್ಗೆ ಕಾಯಿ ಕೆ.ಜಿ. ಬೆಲೆ ಈಗಾಗಲೇ ಶತಕ ದಾಟಿದೆ. ಬಹುತೇಕ ತರಕಾರಿ ಬೆಳೆಗಳು ಕೆ.ಜಿ. ಬರೋಬ್ಬರಿ 50 ರೂ, ಗಡಿ ದಾಟಿವೆ. ಮಾರುಕಟ್ಟೆಯಲ್ಲಿ ಸದ್ಯಕ್ಕೆ ಟೊಮೇಟೋ 25 ರೂ, ಇದ್ದರೆ ಕೆ.ಜಿ. ಈರುಳ್ಳಿ 25 ರೂ, ಇದೆ. ಬೆಳ್ಳುಳ್ಳಿ ಕೆ.ಜಿ. 150 ರೂ. ಇದೆ. ಈರುಳ್ಳಿ, ಬೆಳ್ಳುಳ್ಳಿ ದರ ತುಸು ಕಡಿಮೆ ಇದ್ದು, ಗ್ರಾಹಕರನ್ನು ಸಮಾಧಾನಪಡಿಸಿದೆ. ಆದರೆ ವಾರದಿಂದ ಏರುತ್ತಿರುವ ತರಕಾರಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಇನ್ನೂ ಹೋಟೆಲ್ ಮಾಲಿಕರು ಕೂಡ ತರಕಾರಿ ಬೆಲೆ ಏರಿಕೆಗೆ ತತ್ತರಗೊಂಡಿದ್ದಾರೆ.
“ತರಕಾರಿ ಕಡಿಮೆ, ಹೂ ಬೆಳೆ ಜಾಸ್ತಿ’
ಬೆಳ್ಳಗೆಯೆ ಎದ್ದು ಹೋದರೂ ಮಾರುಕಟ್ಟೆಯಲ್ಲಿ ಖರೀದಿಗೆ ತರಕಾರಿ ಸಿಗುತ್ತಿಲ್ಲ. ವಾರದಿಂದ ತರಕಾರಿ ಬೆಲೆ ಜಾಸ್ತಿ ಆಗಿದೆ. ಈರುಳ್ಳಿ, ಬೆಳ್ಳುಳ್ಳಿ ದರ ಪರವಾಗಿಲ್ಲ. ಆದರೆ ಬೀನ್ಸ್, ನುಗ್ಗೆ ಕಾಯಿ ಕೆ.ಜಿ. 120, 130 ರೂ. ಮಾರಾಟ ಆಗುತ್ತಿದೆ. ಮಳೆಗಾಲದಲ್ಲಿ ತರಕಾರಿ ಮಾರುಕಟ್ಟೆಗೆ ಬರುವುದು ಕಡಿಮೆ. ಜೊತೆಗೆ ಹೂ ಬೆಳೆಯುವರ ಸಂಖ್ಯೆ ಏರಿಕೆ ಆಗಿ ತರಕಾರಿ ಉತ್ಪಾದನೆ ಕುಸಿಯುತ್ತಿದೆ ಎನ್ನುತ್ತಾರೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಚಿಲ್ಲರೆ ತರಕಾರಿ ಮಾರಾಟ ಮಾಡುವ ವೆಂಕಟರೆಡ್ಡಿ ಅವರು.