ವಂದೇ ಮಾತರಂ’ ಚರ್ಚೆ ಅನಗತ್ಯ: ಪ್ರಿಯಾಂಕಾ ಗಾಂಧಿ ವಾಗ್ದಾಳಿ, “ಸಮಸ್ಯೆಗಳನ್ನು ಬಿಟ್ಟು ಹಿಂದಿನದನ್ನೇ ಕೆದಕುತ್ತಿದೆ ಬಿಜೆಪಿ”

ನವದೆಹಲಿ: ದೇಶವು ಇಂದು ನಿರುದ್ಯೋಗ, ಬಡತನ, ಹಣದುಬ್ಬರ, ಮಾಲಿನ್ಯ, ರೈತರ ಬಿಕ್ಕಟ್ಟು ಸೇರಿ ನೂರಾರು ಸಮಸ್ಯೆಗಳಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಸಂಸತ್ತಿನಲ್ಲಿ (Parliament) ಚರ್ಚಿಸುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿರುವ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi), ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.


ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಇಂದು ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನ ನೆಹರು (Nehru) ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್ಗೆ ತಲೆಬಾಗಿ ತುಂಡು ಮಾಡಿದರು ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
ಸಂಸತ್ತಿನಲ್ಲಿ ವಂದೇ ಮಾತರಂ ಚರ್ಚೆ (Vande Mataram Debate) ಅಗತ್ಯವಿತ್ತೇ? ದೇಶದ ಪ್ರತಿಯೊಂದು ಭಾಗದಲ್ಲೂ ಈ ಗೀತೆ ಜೀವಂತವಾಗಿದೆ. ಬಿಜೆಪಿ ಸರ್ಕಾರ ಯಾವಾಗಲೂ ವರ್ತಮಾನ ಮತ್ತು ಭವಿಷ್ಯವನ್ನ ನೋಡಲು ಬಯಸುವುದಿಲ್ಲ ಹಿಂದಿನದ್ದನ್ನೇ ಕೆದಕುತ್ತದೆ. ಸದ್ಯ ಬಂಗಾಳ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆ ಮಾಡುತ್ತಾ ಭಾವನೆ ಕೆರಳಿಸುತ್ತಿದೆ ಎಂದು ಕುಟುಕಿದರು

ಈಗ ಚರ್ಚಿಸುವ ಅಗತ್ಯವೇನು?
ನಮ್ಮ ಸಂಸತ್ತು ರಾಷ್ಟ್ರಗೀತೆಯ ಬಗ್ಗೆ ಚರ್ಚಿಸುತ್ತಿದೆ. ಇದು ಭಾವನೆಗಳನ್ನ ಆಧರಿಸಿದೆ. ವಂದೇ ಮಾತರಂ ಉಲ್ಲೇಖಿಸಿದಾಗ ಈ ಭಾವನೆ ಚಿಮ್ಮುತ್ತದೆ. ವಂದೇ ಮಾತರಂ ಗೀತೆಯು ನಮಗೆ ಸ್ವಾತಂತ್ರ್ಯ ಹೋರಾಟವನ್ನ ನೆನಪಿಸುತ್ತದೆ. ಬ್ರಿಟಿಷ್ ಸಾಮ್ರಾಜ್ಯ ಕೂಡ ಅದರ ಮುಂದೆ ತಲೆಬಾಗಿತ್ತು. ಏಕೆಂದ್ರೆ 150 ವರ್ಷಗಳಿಂದ ಈ ಗೀತೆ ದೇಶದ ಜನರ ಹೃದಯದಲ್ಲಿ ನೆಲೆಸಿದೆ. ಆದ್ರೆ ಈಗ ಏಕೆ ಇದರ ಬಗ್ಗೆ ಚರ್ಚೆಯಾಗುತ್ತಿದೆ? ಇದರ ಉದ್ದೇಶವೇನು? ಎಂದು ಪ್ರಶ್ನೆ ಮಾಡಿದ್ದಾರೆ.

ಮೋದಿ ನೀತಿಯೇ ದೇಶವನ್ನ ದುರ್ಬಲಗೊಳಿಸುತ್ತಿವೆ
ಈ ಸರ್ಕಾರ ವರ್ತಮಾನ, ಭವಿಷ್ಯ ನೋಡಲು ಬಯಸುತ್ತಿಲ್ಲ. ಬರೀ ಹಿಂದಿನದ್ದೇ ಕೆದಕಿಕೊಂಡು ಕುಳಿತಿದೆ. ಮೋದಿ ಅವರು ಮೂರು ಬಾರಿ ಪ್ರಧಾನಿ ಆಗಿದ್ದಾಗಲೂ ಅವರ ನೀತಿಗಳು ದೇಶವನ್ನ ದುರ್ಬಲಗೊಳಿಸುತ್ತಲೇ ಇವೆ. ದೇಶವು ಸದ್ಯ ಹಣದುಬ್ಬರ, ನಿರುದ್ಯೋಗ, ರೈತರ ಬಿಕ್ಕಟ್ಟು ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಅಧಿಕಾರದಲ್ಲಿ ಇರುವವರೂ ಇದನ್ನ ಒಪ್ಪುತ್ತಿದ್ದಾರೆ. ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ಆಗುತ್ತಲೇ ಇದೆ. ಆದ್ರೆ ಅದ್ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ